ಬಡ್ತಿಗೆ ಸಹಾಯಕ ಕೃಷಿ ಅಧಿಕಾರಿಗಳ ಆಗ್ರಹ
ಅನಗತ್ಯ ಕಾರ್ಯಗಳಿಗೆ ಬಳಸಿಕೊಳ್ಳದೆ ಇಲಾಖೆ ಹೊಣೆ ನೀಡಿ
Team Udayavani, Oct 5, 2019, 12:01 PM IST
ರಾಯಚೂರು: ನನೆಗುದ್ದಿಗೆ ಬಿದ್ದ ವೃಂದ ಹಾಗೂ ನೇಮಕಾತಿ ರಚಿಸಿ ಸಹಾಯಕ ಕೃಷಿ ಅಧಿಕಾರಿ ಹುದ್ದೆಯಿಂದ ಕೃಷಿ ಅಧಿಕಾರಿ ಹುದ್ದೆಗೆ ಬಡ್ತಿ ನೀಡುವಂತೆ ಆಗ್ರಹಿಸಿ ಸಹಾಯಕ ಕೃಷಿ ಅಧಿಕಾರಿಗಳ ಸಂಘದ ಸದಸ್ಯರು ಧರಣಿ ನಡೆಸಿದರು.
ಕೃಷಿ ಇಲಾಖೆ ಆವರಣದಲ್ಲಿ ಧರಣಿ ನಡೆಸಿ ಬಳಿಕ ಇಲಾಖೆ ಜಂಟಿ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಗ್ರಾಮ ಮಟ್ಟದ ಮೂಲ ಕಾರ್ಯಕರ್ತರಿಲ್ಲದಿದ್ದರೂ ಸಹಾಯಕ ಕೃಷಿ ಅಧಿಕಾರಿಗಳು ಅನೇಕ ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಮಾತೃ ಇಲಾಖೆ ಜವಾಬ್ದಾರಿ ಜತೆಗೆ ಬೇರೆ ಬೇರೆ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದು, ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದರು.
ಹಿಂದಿನ ಮೈತ್ರಿ ಸರ್ಕಾರ 2-3 ತಿಂಗಳಲ್ಲಿ ಮುಂಬಡ್ತಿ ನೀಡುವ ಭರವಸೆ ನೀಡಿತ್ತು. ಆದರೆ, ಜಾರಿಯಾಗಲೇ ಇಲ್ಲ. ಸಾಕಷ್ಟು ಬಾರಿ ಇಲಾಖೆ ಹಾಗೂ ಸರ್ಕಾರಕ್ಕೆ ದೂರಿದರೂ ಕ್ರಮ ಕೈಗೊಂಡಿಲ್ಲ. ಇದರಿಂದ ಒಂದೇ ಹುದ್ದೆಯಲ್ಲಿ 30ರಿಂದ 35 ವರ್ಷಗಳ ಕಾಲ ಕೆಲಸ ಮಾಡುವ ಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೂಡಲೇ ಬಡ್ತಿ ನೀಡಬೇಕು. ಅನಗತ್ಯ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳದೆ ಇಲಾಖೆ ಹೊಣೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ನಾಗರೆಡ್ಡಿ ಹಂಚಿನಾಳ, ಗೌರವಾಧ್ಯಕ್ಷ ಮಲ್ಲಣ್ಣ, ಪ್ರಧಾನ ಕಾರ್ಯದರ್ಶಿ ಅಮರಪ್ಪ, ಜಂಟಿ ಕಾರ್ಯದರ್ಶಿ ವೆಂಕಣ್ಣ ಯಾದವ, ಸದಸ್ಯರಾದ ಶೌಕತ್ ಅಲಿ, ಸದಸ್ಯರಾದ ವೆಂಕಟೇಶ, ಬಸವರಾಜ, ಶಿವಶರಣ, ನೇಹ ಕುಲಕರ್ಣಿ, ಶೋಭಾ, ನರಸಮ್ಮ, ಜ್ಯೋತಿ, ಮಾಲತಿ, ಅಶ್ವಿನಿ, ಜಯಶ್ರೀ ಪಾಲ್ಗೊಂಡಿದ್ದರು.