ದಿನಗೂಲಿ ಹೆಚ್ಚಿಸಲು ಕಟ್ಟಡ ಕಾರ್ಮಿಕರ ಒಕ್ಕೂಟ ಒತ್ತಾಯ
Team Udayavani, Mar 27, 2022, 5:39 PM IST
ರಾಯಚೂರು: ಕಟ್ಟಡ ನಿರ್ಮಾಣ ಹಾಗೂ ಕೃಷಿ ಕಾರ್ಮಿಕರಿಗೆ ದಿನಗೂಲಿ ಹೆಚ್ಚಿಸಬೇಕು. ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಗತಿಪರ ಕರ್ನಾಟಕ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಒಕ್ಕೂಟದ ಸದಸ್ಯರು, ದಿನ ಬಳಕೆ ವಸ್ತುಗಳ ಬೆಲೆ ದಿನೇ-ದಿನೇ ಹೆಚ್ಚಾಗುತ್ತಿದೆ. ಕಟ್ಟಡ-ಕೃಷಿ ಕಾರ್ಮಿಕರು, ಸಾಮಾನ್ಯರಿಗೆ ಬೆಲೆ ಏರಿಕೆಯಿಂದ ಜೀವನ ಸಾಗಿಸುವುದೇ ಕಷ್ಟವಾಗಿದೆ. ಕಟ್ಟಡ ಸಾಮಗ್ರಿಗಳ ಬೆಲೆ ಕಡಿಮೆ ಮಾಡಬೇಕು.
ಸಿಮೆಂಟ್, ಕಬ್ಬಿಣ ಹಾಗೂ ಇತರೆ ಕಟ್ಟಡ ನಿರ್ಮಾಣ ಸಾಮಗ್ರಿ ದುಬಾರಿಯಾಗಿದ್ದರಿಂದ ಮನೆ ನಿರ್ಮಿಸಲು ಹಿಂಜರಿಯುವ ಸ್ಥಿತಿ ಇದೆ. ಇದರಿಂದ ಕಾರ್ಮಿಕರಿಗೆ ಕೆಲಸ ಸಿಗದ ಪರಿಸ್ಥಿತಿ. ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು. ನಿರುದ್ಯೋಗ ಭತ್ಯೆ ನೀಡಬೇಕು. ಅಡುಗೆ ಅನಿಲ, ಇಂಧನ ದರ ಹಾಗೂ ದಿನಸಿ ಸಾಮಗ್ರಿ ಬೆಲೆ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ರಂಗಪ್ಪ ಅಸ್ಕಿಹಾಳ, ಜಿಲ್ಲಾ ಉಪಾಧ್ಯಕ್ಷ ಬಿ.ಸುಧಾನಂದ, ಪ್ರಧಾನ ಕಾರ್ಯದರ್ಶಿ ಕಡಗೋಳ ತಿಮ್ಮಪ್ಪ, ಸದಸ್ಯರಾದ ಗೋವಿಂದ, ರಮೇಶ, ಹನುಮೇಶ ಭಂಗಿ, ವಿ. ಈರಣ್ಣ ಇತರರಿದ್ದರು.