ಜಿಲ್ಲೆಯಲ್ಲಿ ಒಂಭತ್ತು ಲಕ್ಷ ಕುರಿ- ಮೇಕೆಗಳ ಸಾಕಾಣಿಕೆ: ಮಲ್ಲಯ್ಯ
Team Udayavani, Nov 23, 2021, 3:51 PM IST
ಮಾನ್ವಿ: ಜಿಲ್ಲೆಯಲ್ಲಿ ಸಂಚಾರಿ ಹಾಗೂ ಸ್ಥಳೀಯವಾಗಿ ಒಂಭತ್ತು ಲಕ್ಷ ಕುರಿ ಮತ್ತು ಮೇಕೆಗಳನ್ನು ಕುರಿಗಾರರು ಸಾಕಾಣಿಕೆ ಮಾಡುತ್ತಿದ್ದಾರೆ ಎಂದು ಅಮೋಘಸಿದ್ದೇಶ್ವರ ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗೊರ್ಕಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರಿಗಳಿಗೆ ಚರ್ಮಗಂಟು ರೋಗ ಹಾಗೂ ಕಾಲು ಬಾಯಿ ರೋಗದಂತಹ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿದ್ದು, ಮಾನ್ವಿ ತಾಲೂಕಿನಲ್ಲಿ ಪಶು ವೈದ್ಯರ ಕೊರತೆ ಹಾಗೂ ಸರಕಾರದಿಂದ ಸೂಕ್ತ ಔಷ ಧಿಗಳು ದೊರೆಯದೆ ಇರುವುದರಿಂದ ಕುರಿಗಳ ಸಾವು ಸಂಭವಿಸುತ್ತಿವೆ. ಕೂಡಲೇ ಸರಕಾರದಿಂದ ಅಗತ್ಯ ಔಷಧಿ ಗಳನ್ನು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಅನುಗ್ರಹ ಯೋಜನೆಯಡಿ 5 ಸಾವಿರ ಪರಿಹಾರವನ್ನು ನೀಡುತ್ತಿರುವುದನ್ನು ಮುಂದುವರಿಸಬೇಕು. ಅನುಗ್ರಹ ಯೋಜನೆಯಡಿ ವಿತರಿಸುವ ಪರಿಹಾರ ವಿತರಣೆಯನ್ನು ಸಂಪೂರ್ಣವಾಗಿ ಪಶು ಅಧಿಕಾರಿಗಳಿಗೆ ವಹಿಸಬೇಕು ಹಾಗೂ ಅತೀಯಾದ ಮಳೆಯಿಂದ ಕುರಿಗಳ ಸುರಕ್ಷತೆಗಾಗಿ ಅಗತ್ಯಕ್ಕೆ ಅನುಗುಣವಾಗಿ ಕುರಿಗಾರರಿಗೆ ಟೆಂಟ್, ಬಲೆ ಮತ್ತು ಇನ್ನಿತರ ಪರಿಕರಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು. ಮುದುಕಪ್ಪ ಜಡೇ, ಪ್ರಕಾಶ ಪಾಟೀಲ್, ದೇವಾ ಇದ್ದರು.