ಶೌಚಗೃಹ ಸಿಬ್ಬಂದಿಯಿಂದ ಹಗಲು ದರೋಡೆ
Team Udayavani, Dec 9, 2021, 2:12 PM IST
ರಾಯಚೂರು: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಇರುವ ಸಾರ್ವಜನಿಕ ಶೌಚಾಲಯದ ಸಿಬ್ಬಂದಿ ಜನರಿಂದ ಹಗಲು ದರೋಡೆ ಮಾಡುತ್ತಿದ್ದು, ಅದಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಪಕ್ಷ ಸಮಿತಿ ಪಕ್ಷ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿತು.
ಸರ್ಕಾರದ ಆದೇಶದ ಪ್ರಕಾರ ನಗರ ಶೌಚಾಲಯದಲ್ಲಿ ಕೇವಲ 3 ರೂ. ಮಾತ್ರ ಪಡೆಯಬೇಕು. ಆದರೆ, ಇಲ್ಲಿ ಅಕ್ರಮವಾಗಿ 10 ರೂ. ಪಡೆಯುತ್ತಿದ್ದು, ಜನರಿಂದ ಸುಲಿಗೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಿಂದ, ಬೇರೆ ಜಿಲ್ಲೆಗಳಿಗೆ ಹೋಗುವ ನೂರಾರು ಜನ ನಿತ್ಯ ನಿಲ್ದಾಣಕ್ಕೆ ಬಂದು ಹೋಗುತ್ತಾರೆ. ಅದರಲ್ಲೂ ಬಡವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಇಲ್ಲಿ ಶೌಚಗೃಹ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗಲಿದೆ ಎಂದರು.
ಎಲ್ಲಿಯೂ ದರ ಪಟ್ಟಿಯನ್ನು ಕೂಡ ಅಳವಡಿಸಿಲ್ಲ. ಸಿಬ್ಬಂದಿ ಮಾಸ್ಕ್ ಧರಿಸದೆ, ನಿತ್ಯದ ವ್ಯವಹಾರಗಳಲ್ಲಿ ಕನ್ನಡವನ್ನು ಕಲಿಯದೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಶೌಚಗೃಹ ನಿರ್ವಹಣೆ ಹೊತ್ತ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಿರೂಪ್ ಕೆ. ಗೋಮರ್ಸಿ, ಗ್ರಾಮೀಣ ಯುವ ಘಟಕದ ಅಧ್ಯಕ್ಷ ಹನುಮಂತ, ಪರಸಪ್ಪ ಸೇರಿ ಇತರರಿದ್ದರು.