ರೈತರಿಗೆ ವಾತಾವರಣ ವೈಪರೀತ್ಯ ಅರಿವು ಅಗತ್ಯ: ಡಾ| ಸಾಲಿಮಠ
Team Udayavani, Jan 9, 2018, 2:54 PM IST
ರಾಯಚೂರು: ಇತ್ತೀಚಿನ ದಿನಗಳಲ್ಲಿ ವಾತವಾರಣದ ವೈಪರೀತ್ಯದಿಂದ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅನಾನುಕೂಲ ಗಳಾಗುತ್ತಿದೆ. ಈ ಬಗ್ಗೆ ರೈತರು ಅರಿತುಕೊಳ್ಳುವ ಅಗತ್ಯವಿದೆ ಎಂದು ಕೃಷಿ ವಿವಿ ಕುಲಪತಿ ಡಾ| ಪಿ.ಎಂ.ಸಾಲಿಮಠ
ಹೇಳಿದರು.
ನಗರದ ಕೃಷಿ ವಿವಿ ಸಭಾಂಗಣದಲ್ಲಿ ವಿಸ್ತರಣಾ ನಿರ್ದೇಶನಾಲಯ, ಕೇಂದ್ರ ಸರ್ಕಾರದ ಕೇಂದ್ರ ಸಹಕಾರ ಮತ್ತು ರೈತರ ಕ್ಷೇಮಾಭಿವೃದ್ಧಿ ಸಹಯೋಗದಲ್ಲಿ ಹಮ್ಮಿಕೊಂಡ ವಾತಾವರಣ ವೈಪರೀತ್ಯ ಹಾಗೂ ಅದಕ್ಕೆ ಕಾರಣಗಳು, ಪರಿಣಾಮಗಳು ಮತ್ತು ಪರಿಹಾರೋಪಾಯಗಳು ಕುರಿತ ಎಂಟು ದಿನಗಳ ರಾಷ್ಟ್ರೀಯ ತರಬೇತಿ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೇ ಬೆಳೆ ಬೆಳೆಯಲು ಅಲ್ಲಿನ ವಾತಾನುಕೂಲ ಅತ್ಯಗತ್ಯ. ಆದರೆ, ಅದಕ್ಕೆ ತಕ್ಕಂತೆ ಬೆಳೆ ಬೆಳೆದಾಗ ಮಾತ್ರ
ಅನುಕೂಲವಾಗಲಿದೆ. ಇಲ್ಲವಾದರೆ ರೈತರು ನಷ್ಟದ ಭೀತಿ ಎದುರಿಸಬೇಕಾಗುತ್ತದೆ. ಹೀಗಾಗಿ ರೈತರಿಗೆ ತಾನುಕೂಲದ
ಮಾಹಿತಿ ನೀಡಬೇಕು. ಈ ಬಗ್ಗೆ ಅರಿವು ಮೂಡಿಸುವಲ್ಲಿ ಈ ತರಬೇತಿಯು ಅತಿ ಮುಖ್ಯ. ಅದರಲ್ಲೂ ವಿಸ್ತರಣಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಇದರ ಪ್ರಾಮುಖ್ಯತೆ ಅತ್ಯಮೂಲ್ಯ ಎಂದರು.
ಸಂಶೋಧನಾ ನಿರ್ದೇಶಕ ಡಾ| ಐ. ಶಂಕರಗೌಡ ಮಾತನಾಡಿ, ವಾತಾವರಣ ವೈಪರೀತ್ಯ ತಡೆಯುವ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಸಂಶೋಧನೆ ಮೂಲಕ ಮಾಡುವುದು ಅತ್ಯವಶ್ಯಕ. ವ್ಯತಿರಿಕ್ತ ವಾತಾವರಣವಿದ್ದರೆ ರೈತರು ನಷ್ಟ ಎದುರಿಸಬೇಕಾಗುತ್ತದೆ. ಅದರಿಂದ ಬಚಾವಾಗುವ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದರು.
ನಿರ್ದೇಶಕ ಡಾ| ಎ.ಜಿ. ಶ್ರೀನಿವಾಸ ಪ್ರಾಸ್ತಾವಿಕ ಮಾತನಾಡಿ, ಎಂಟು ದಿನಗಳ ತರಬೇತಿ ಕಾರ್ಯಾಗಾರದಲ್ಲಿ 32 ವಿಷಯ ತಜ್ಞರಿಂದ ಭೋದನೆ ನೀಡಲಾಗುವುದು. ಒಂದು ದಿನ ಅಂತಾರಾಷ್ಟ್ರೀಯ ಸಂಸ್ಥೆಗಳು ಹೈದರಾಬಾದ್ನಲ್ಲಿ ಕ್ಷೇತ್ರ ಭೇಟಿ ಮಾಡಲಾಗುವುದು. ತರಬೇತಿಗೆ ರಾಜ್ಯದಿಂದ 10, ದೆಹಲಿಯಿಂದ ಮೂವರು, ತೆಲಂಗಾಣದಿಂದ ಮೂವರು, ತಮಿಳುನಾಡಿನಿಂದ ಇಬ್ಬರು ಶಿಬಿರಾರ್ಥಿಗಳು ಭಾಗವಹಿಸುವರು ಎಂದು ಹೇಳಿದರು.
ಡಾ| ಎ.ಎಸ್.ಹಳೇಪ್ಯಾಟಿ, ಡಾ| ಎಂ. ಭೀಮಣ್ಣ ಮಾತನಾಡಿದರು. ಡಾ| ಎಸ್.ಕೆ.ಮೇಟಿ ಅಧ್ಯಕ್ಷತೆ ವಹಿಸಿದ್ದರು. ಸಹ ತರಬೇತಿ ನಿರ್ದೇಶಕ ಡಾ| ಅಶೋಕ ಜೆ., ಡಾ| ಶ್ರೀವಾಣಿ ಜಿ.ಎನ್., ಡಾ| ಎಸ್.ಜಿ. ಹಂಚಿನಾಳ, ಡಾ| ಅಶ್ವಥ್ ನಾರಾಯಣ ಇತರರಿದ್ದರು.