ಹಾರುಬೂದಿ ನಿಯಂತ್ರಣಕ್ಕೆ ಒತ್ತಾಯ
Team Udayavani, Mar 16, 2022, 4:49 PM IST
ರಾಯಚೂರು: ಚಿಕ್ಕಸುಗೂರು ವ್ಯಾಪ್ತಿಯಲ್ಲಿ ಹಾರು ಬೂದಿ ಸಮಸ್ಯೆ ಹೆಚ್ಚಾಗಿದ್ದು, ತಿರಸ್ಕರಿಸಿದ ಕಲ್ಲಿದ್ದಲು ಬೇರೆಡೆ ಸ್ಥಳಾಂತರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಕಾರಿಗಳು ಹಾಗೂ ಕಾರ್ಯಕರ್ತರು ಒತ್ತಾಯಿಸಿದರು.
ಈ ಕುರಿತು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ತಿರಸ್ಕರಿಸಿದ ಕಲ್ಲಿದ್ದಲು ಚಿಕ್ಕಸುಗೂರಿನ ಗ್ರಾಮದ ಪಕ್ಕದಲ್ಲಿ ಹಾಕಲಾಗುತ್ತಿದೆ. ಇದರಿಂದಾಗಿ ಮಕ್ಕಳಿಗೆ ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಸಮಸ್ಯೆ ವಿವರಿಸಿದರು.
ಹಾರು ಬೂದಿಗಳ ವಾಹನ ಹೆಚ್ಚಾಗಿ ಸಾಗಣೆ ಮಾಡುವ ಹಿನ್ನೆಲೆಯಲ್ಲಿ ಚರ್ಮರೋಗಕ್ಕೆ ತುತ್ತಾಗುತ್ತಿದ್ದಾರೆ. ಹಾರುಬೂದಿ ಹಾವಳಿ ಹಾಗೂ ಹೊಗೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಕೂಡಲೇ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜನರಿಗೆ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ಹೆಗ್ಗಸನಹಳ್ಳಿ ಹಾಗೂ ವಡ್ಲೂರು ಗ್ರಾಮಸ್ಥರ ನೇತೃತ್ವದಲ್ಲಿ ವೈಟಿಪಿಎಸ್ ದ್ವಾರದ ಬಳಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ನರಸಿಂಹಲು, ಪದಾಧಿಕಾರಿಗಳಾದ ಬಡೇಸಾಬ್, ಕೃಷ್ಣಮೂರ್ತಿ, ಮಂಜುನಾಥ ಸೇರಿದಂತೆ ಇತರರಿದ್ದರು.