ಮಗಳ ಪ್ರೇಮ ವಿವಾಹಕ್ಕೆ ವಿರೋಧ: ಅಳಿಯ ಮನೆಯ ನಾಲ್ವರನ್ನು ಹಾಡುಹಗಲೇ ಬರ್ಬರ ಕೊಲೆ
Team Udayavani, Jul 11, 2020, 7:04 PM IST
ರಾಯಚೂರು: ಮಕ್ಕಳ ಪ್ರೀತಿಯನ್ನು ಒಪ್ಪಿಕೊಳ್ಳದೆ ಹಗೆ ಸಾಧಿಸಿದ ಯುವತಿಯ ಕುಟುಂಬದವರು ಬೀಗರ ಮನೆಯ ನಾಲ್ವರನ್ನು ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಿದ ಅಮಾನವೀಯ ಘಟನೆ ಸಿಂಧನೂರಿನಲ್ಲಿ ಶನಿವಾರ ನಡೆದಿದ್ದು, ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ.
ಏಳು ತಿಂಗಳ ಹಿಂದೆ ಒಂದೇ ಜಾತಿಯ ಮೌನೇಶ (21) ಮಂಜುಳಾ (18) ಗದಗದಲ್ಲಿ ಮದುವೆಯಾಗಿದ್ದರು. ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ, ಇವರ ವಿವಾಹವನ್ನು ಯುವತಿಯ ಮನೆಯವರು ಮಾನ್ಯ ಮಾಡಿರಲಿಲ್ಲ. ಆದರೆ ಶನಿವಾರ ನೂತನ ದಂಪತಿ ಯುವತಿಯ ಮನೆಗೆ ಹೋಗಿದ್ದರು. ಇದನ್ನು ಸಹಿಸದ ಯುವತಿ ಮನೆಯವರು ರೇಗಾಡಿದ್ದರು. ಇದರಿಂದ ಜೀವಭಯದಿಂದ ಪ್ರೇಮಿಗಳು ಠಾಣೆಗೆ ದೂರು ನೀಡಲು ಹೋಗಿದ್ದರು. ಇದರಿಂದ ಕುಪಿತಗೊಂಡ ಯುವತಿ ಮನೆಯವರು ಹುಡುಗನ ಮನೆಗೆ ಬಂದು ಗಲಾಟೆ ಮಾಡಿ ಕೈಗೆ ಸಿಕ್ಕ ಕಬ್ಬಿಣದ ರಾಡು, ಕಟ್ಟಿಗೆಗಳನ್ನು ತೆಗೆದುಕೊಂಡು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಘಟನೆಯಲ್ಲಿ ಹುಡುಗನ ತಾಯಿ ಸುಮಿತ್ರಮ್ಮ (55), ಸಹೋದರರಾದ ನಾಗರಾಜ (38), ಹನುಮೇಶ (40), ಸಹೋದರಿ ಶ್ರೀದೇವಿ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂದೆ ಈರಪ್ಪ (65), ಇನ್ನಿಬ್ಬರು ಸಹೋದರಿಯರಾದ ರೇವತಿ (20), ತಾಯಮ್ಮ (25) ಕೂಡ ಗಾಯಗೊಂಡಿದ್ದಾರೆ.
ಘಟನೆಯ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದಿರುವ ಸಿಂಧನೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.