ಸದೃಢ ಮತದಾರರಿಂದ ಸಶಕ್ತ ದೇಶ ನಿರ್ಮಾಣ
Team Udayavani, Apr 7, 2018, 3:29 PM IST
ರಾಯಚೂರು: ಸದೃಢ ಮತದಾರರಿಂದ ಸದೃಢ ದೇಶ ನಿರ್ಮಾಣ ಸಾಧ್ಯ. ಆರೋಗ್ಯ ಸದೃಢತೆಗಾಗಿ ಆರೋಗ್ಯ ಶಿಬಿರಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಪಂ ಸಿಇಒ ಅಭಿರಾಮ್ ಜಿ. ಶಂಕರ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಸ್ಥಳೀಯ ಎಲ್ಬಿಎಸ್ ನಗರದಲ್ಲಿ ಶುಕ್ರವಾರ ಮತದಾರರ ಜಾಗೃತಿ ನಿಮಿತ್ತ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ವಯಸ್ಕ ಮತದಾರರು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು.
ನಿರ್ಭೀತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳು, ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸಬೇಕು ಎಂದರು. ಶಿಬಿರದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕುರಿತಾದ ಪ್ರತಿಜ್ಞಾ ವಿಧಿಬೋಧಿ ಸಲಾಯಿತು. ಆರೋಗ್ಯ ಶಿಬಿರದಲ್ಲಿ ರೋಗಿಗಳ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು.
ಪ್ರೊಬೇಷನರಿ ಐಎಎಸ್ ಅಧಿಕಾರಿ ದರ್ಶನ, ಆರೋಗ್ಯ ಇಲಾಖೆ ಅಧಿಕಾರಿ ಡಾ| ಎಂ.ಕೆ.ಎಸ್. ನಸೀರ್, ಡಾ| ಕೆ.ವಿಜಯಾ, ಡಾ| ಲಕ್ಷ್ಮೀಬಾಯಿ, ಡಾ| ಮನೋಹರ ಪತ್ತಾರ, ಡಾ| ಶೀತಲ್, ಡಾ| ಎಂ.ಡಿ. ಶಾಕೀರ್ ಮೊಯುದ್ದೀನ್ ಹಾಗೂ ವೈದ್ಯರು, ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.