ದಾರಿಯುದ್ದಕ್ಕೂ ತಗ್ಗು, ದಿನ್ನೆಗಳದ್ದೇ ದರ್ಬಾರ್
ಎರಡು ತಿಂಗಳು ಕಳೆದರೂ ಇನ್ನೂ ಕೆಲಸ ಆರಂಭವಾಗದಿರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ.
Team Udayavani, Jun 14, 2022, 6:26 PM IST
ಕುದೂರು: ನಾವೇನು ಇನ್ನೂ ಶಿಲಾಯುಗದಲ್ಲೇ ಇದ್ದೇವೆಯೇ? ಇದೇನು ರಸ್ತೆಯೂ ಅಥವಾ ಗುಡ್ಡಗಾಡು ಪ್ರದೇಶವೋ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ವರ್ಷಗಳೇ ಕಳೆದರೂ ಡಾಂಬರು ಕಾಣದ ರಸ್ತೆ, ದಾರಿಯುದ್ದಕ್ಕೂ ತಗ್ಗು, ದಿನ್ನೆಗಳದ್ದೇ ದರ್ಬಾರ್ ವಾಹನ ಸಂಚಾರ ಇರಲಿ, ಪಾದಚಾರಿಗಳು ಸಂಚಾರ ಮಾಡುವುದು ಕಷ್ಟ. ಹೌದು, ಮಾಗಡಿ ತಾಲೂಕಿನ ಕುದೂರು ಮುಖ್ಯ ರಸ್ತೆಯ ಪರಿಸ್ಥಿತಿ ಇದಾಗಿದೆ.
ರಸ್ತೆಯಲ್ಲಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ, ಈ ರಸ್ತೆಯಲ್ಲಿ ಗುಂಡಿಗಳ ದರ್ಬಾರೇ ಹೆಚ್ಚಾಗಿದೆ. ರಸ್ತೆಗೆ ಹಾಕಿದ್ದ ಎಲ್ಲಾ ಕಲ್ಲುಗಳು ಕಿತ್ತು ಆಳುದ್ದದ ಗುಂಡಿಗಳು ಬಿದ್ದಿವೆ. ಇಲ್ಲಿ ಸಂಚಾರ ಮಾಡಬೇಕೆಂದರೆ ಪ್ರಾಣವನ್ನೇ ಕೈಯಲ್ಲಿಟ್ಟುಕೊಂಡು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಮಳೆಗಾಲದಲ್ಲಿ ಓಡಾಡುವುದೇ ದುಸ್ಸಾಹಸವಾಗಿದೆ.
ಹದಗೆಟ್ಟ ರಸ್ತೆಯಲ್ಲಿ ಆಳದ ಗುಂಡಿಗಳು ಬಿದ್ದು ಗಬ್ಬೆದ್ದು ಹೋಗಿದೆ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಜನಪ್ರತಿನಿಧಿಗಳು ತಲೆ ಕೆಡೆಸಿಕೊಂಡಿಲ್ಲ. ಕೇವಲ ಚುನಾವಣೆ ಬಂದಾಗ ಮಾತ್ರ ಹಳ್ಳಿಗಳ ಕಡೆ ತಲೆ ಹಾಕಿ, ಮಲಗುವ ರಾಜಕಾರಣಿಗಳಿಗೆ ಮಿಕ್ಕ ಸಂದರ್ಭದಲ್ಲಿ ಪ್ರಯಾಣಿಕರ ಹಾಗೂ ಗ್ರಾಮಸ್ಥರ ಗೋಳು ಕೇಳಿಸುವುದಿಲ್ಲವೇ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಜೀವ ಕೈಯಲ್ಲಿ ಹಿಡಿದು ಸಂಚಾರ: ಕುದೂರಿನ ಮುಖ್ಯರಸ್ತೆಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಹನವನ್ನು ನಡೆಸಬೇಕು. ಗರ್ಭಿಣಿಯರು ಈ ರಸ್ತೆಯ ಮೇಲೆ ಸಂಚರಿಸಲು ಹೆದರುವಂತಹ ಪರಿ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಜನ ಸಾಮಾನ್ಯರು ಸಂಚರಿಸಬೇಕಾದರೆ ಯಮ ಧರ್ಮನಿಗೆ ಡೆತ್ ನೋಟ್ ಬರೆದು ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಸಂಚಾರ ಮಾಡಬೇಕಾದ ಮಟ್ಟಕ್ಕೆ ರಸ್ತೆ ಹಾಳಾಗಿದೆ. ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳಿದ್ದು, ಅಪಘಾತಕ್ಕೆ ಕಾದು ಬಾಯಿ ತೆರೆದಿರುವಂತೆ ಭಾಸವಾಗುತ್ತಿವೆ. ಈ ರಸ್ತೆಯಲ್ಲಿ ವಾಹನಗಳು ಚಲಿಸುವಾಗ, ವಾಹನ ಸಂಚಾರಿಸುತ್ತವೆಯೋ ಅಥವಾ ನರ್ತಿಸುತ್ತವೇಯೋ
ಎಂಬ ಅನುಮಾನ ಸವಾರರಲ್ಲಿ ಮೂಡುತ್ತಿದೆ.
ರಸ್ತೆ ಅಗಲೀಕರಣ ನೆಪವೊಡ್ಡಿ ಮರಗಳು ನಾಶ: ರಸ್ತೆ ಅಗಲೀಕರಣ ನೆಪವೊಡ್ಡಿ ರಸ್ತೆಯ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಮರಗಳನ್ನು ಕಡಿದು, ಎಂಟು ತಿಂಗಳು ಕಳೆದರೂ ರಸ್ತೆ ಅಭಿವೃದ್ಧಿಪಡಿಸದೆ ಇರುವುದರಿಂದ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, 10 ದಿನಗಳಲ್ಲಿ ಕೆಲಸ ಪ್ರಾರಂಭಿಸುತ್ತೇವೆ ಎಂದು ಹೇಳಿ ಹೋಗಿ, ಎರಡು ತಿಂಗಳು ಕಳೆದರೂ ಇನ್ನೂ ಕೆಲಸ ಆರಂಭವಾಗದಿರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ.
ಕಾಮಗಾರಿ ಪ್ರಾರಂಭಿಸುವ ಮನ್ಸೂಚನೆ ಕಾಣುತ್ತಿಲ್ಲ: ರಸ್ತೆ ಅಭಿವೃದ್ಧಿ ಕುರಿತು ಶಾಸಕರ ಗಮನಕ್ಕೆ ತಂದ ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಎರಡು ತಿಂಗಳಾದರೂ ರಸ್ತೆ ಕಾಮಗಾರಿ ಪ್ರಾರಂಭವಾಗುವ ಯಾವುದೇ ಮನ್ಸೂಚನೆ ಕಾಣುತ್ತಿಲ್ಲ. ಕುದೂರಿನ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸುವುದಕ್ಕೆ ಇನ್ನೇಷ್ಟು ವರ್ಷ ಕಾಯಬೇಕು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರ ಮೇಲೆ ಕುದೂರು ಮುಖ್ಯ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಒತ್ತಡ ಏರಿ ಕಾಮಗಾರಿಯನ್ನು ಆರಂಭಿಸುವ ಕೆಲಸ ಮಾಡಬೇಕಿದ್ದ ಕುದೂರು ಗ್ರಾಪಂ, ಈ ವಿಷಯವಾಗಿ ಬೇಜವಾಬ್ದಾರಿ ತೋರಿದೆ. ಜನರ ಬಳಿ ಮತ ಕೇಳುವಾಗಿದ್ದ ಆಸಕ್ತಿ
ಈಗಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕಾಗಿ ಇದ್ದಂತಹ ಸಹಕಾರ, ಅಭಿವೃದ್ಧಿ ವಿಚಾರದಲ್ಲಿಲ್ಲ.ಅಧಿಕಾರಿಗಳಿಂದ ಕೆಲಸ ಮಾಡಿಸಿ, ಗ್ರಾಮೀಣ ಭಾಗದ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡುವುದಕ್ಕೆ ಮನಸ್ಸಿಲ್ಲ.
ಎರಡು ದಿನಗಳ ಹಿಂದೆ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕುದೂರು ಮುಖ್ಯ ರಸ್ತೆ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಅವರು ಕಲಾವಕಾಶ ಕೇಳಿದ್ದಾರೆ. ಈ ವಾರದಲ್ಲಿ ಕಾಮಗಾರಿ ಪ್ರಾರಂಭ ಮಾಡದಿದ್ದರೆ, ಟೆಂಡರ್ ರದ್ದುಗೊಳಿಸಲಾಗುವುದು ಎಂದು ಸೂಚಿಸಿದ್ದೇವೆ.
● ರಾಮಣ್ಣ, ಎಇಇ,
ಲೋಕೋಪಯೋಗಿ ಇಲಾಖೆ
ವೃದ್ಧರು, ಗರ್ಭಿಣಿಯರು ಚಿಕಿತ್ಸೆಗಾಗಿ ಪಟ್ಟಣದ ಆಸ್ಪತ್ರೆ ತೆರಳಲು ವಾಹನ ಚಾಲಕರು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕು ತ್ತಾರೆ. ಪ್ರಶ್ನಿಸದರೆ, ನಿಮ್ಮ ಊರಿನ ರಸ್ತೆ ಹದಗೆಟ್ಟಿದೆ ಎಂದು ದೂರುತ್ತಾರೆ. ಹದಗೆಟ್ಟ ರಸ್ತೆ ಸರಿಪಡಿಸುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲ. ವರ್ಷಗಳಿಂದ ರಸ್ತೆ ಅವ್ಯವಸ್ಥೆಯಿಂದ ರೋಸಿ ಹೋಗಿದ್ದೇವೆ. ಆದರೂ, ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ.
● ನಟರಾಜು, ಸ್ಥಳೀಯ ನಿವಾಸಿ
ಇನ್ನೊಂದು ವಾರದೊಳಗೆ ರಸ್ತೆ ಅಭಿವೃದ್ಧಿಪಡಿಸದೆ ಹೋದರೆ, ಗ್ರಾಮಸ್ಥರೆಲ್ಲಾ ಸೇರಿಕೊಂಡು ರಸ್ತೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ.
● ವಿವೇಕ್, ಕುದೂರು ನಿವಾಸಿ
ರಸ್ತೆ ಅಭಿವೃದ್ಧಿ ಪಡಿಸುತ್ತೇವೆಂದು ಇದ್ದ ರಸ್ತೆಯನ್ನು ಹಾಳು ಮಾಡಿ, ವರ್ಷಗಳೇ ಕಳೆದರೂ ಇದಕ್ಕೆ ಮುಕ್ತಿ ದೊರಕಿಸಲಿಲ್ಲ. ರಸ್ತೆ ಕಿತ್ತು ಹಾಕಿರುವುದರಿಂದ ಧೂಳು ಕುಡಿದು ಕಾಯಿಲೆಗಳನ್ನು ಬರಸಿಕೊಳ್ಳಿ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ನಮಗೆ ನೀಡುತ್ತಿರುವ ಬಹುಮಾನ.
● ಬಿ.ಜಿ.ಕೃಷ್ಣಕುಮಾರ್, ಅಧ್ಯಕ್ಷ, ವರ್ತಕರ ಸಂಘ
● ಕೆ.ಎಸ್.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ