ರಾಮನಗರ: ನಿರ್ಮಾಣ ಹಂತದ ಕಟ್ಟಡ ಕುಸಿದು ಬಾಲ ಕಾರ್ಮಿಕ ದುರಂತ ಸಾವು
Team Udayavani, Jan 29, 2022, 7:44 PM IST
ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಾಲಕಾರ್ಮಿಕನೊಬ್ಬ ಸಾವಿಗೀಡಾಗಿರುವ ದಾರುಣ ಘಟನೆ ಸಂಭವಿಸಿದೆ.
ಬಳ್ಳಾರಿ ಮೂಲದ ಭೀಮ(13) ದುರ್ಘಟನೆಯಲ್ಲಿ ಸಾವಿಗೀಡಾದ ಬಾಲಕಾರ್ಮಿಕ. ಸಿದ್ದಪ್ಪ ಎಂಬುವರು ನಿರ್ಮಾಣ ಮಾಡುತ್ತಿರುವ ಕಟ್ಟಡದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಇಂದು ಕಟ್ಟಡದ ಎರಡನೇ ಅಂತಸ್ತಿನ ಮೇಲ್ಛಾವಣಿ ಕುಸಿದು ಬಿದ್ದಿದೆ.
ಈ ಸಮಯದಲ್ಲಿ ಕೆಳಗೆ ಕೆಲಸ ಮಾಡುತ್ತಿದ್ದ ಭೀಮನ ಮೇಲೆ ಗೋಡೆ ಮುರಿದು ಕಾಂಕ್ರೀಟ್ ಸಮೇತ ಬಿದ್ದಿದೆ. ಗ್ರಾಮಸ್ಥರು ಜೆಸಿಬಿ ಸಹಾಯದಿಂದ ಕಟ್ಟಡದ ಅವಶೇಷಗಳನ್ನು ಬದಿಗೆ ಸರಿಸಿ ನೋಡಿದಾಗ ಬಾಲಕ ಉಸಿರುಗಟ್ಟಿ ಸ್ಥಳದಲ್ಲೇ ಸಾವಿಗೀಡಾಗಿದ್ದ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕ ಇಲಾಖೆ ವಿರುದ್ದ ಜನಾಕ್ರೋಶ: ಕಟ್ಟಡ ಕಾಮಗಾರಿ ಸೇರಿದಂತೆ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರಿದ್ದಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳ ಬಳಿ ಈ ಮಾಹಿತಿ ಇದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ನಾಗರೀಕರು ತಮ್ನ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.