ಗ್ರಂಥಾಲಯದಲ್ಲಿ ಪುಸ್ತಕಗಳೇ ಇಲ್ಲ!
ಧೂಳು ತಿನ್ನುತ್ತಿವೆ ಸಾಮಗ್ರಿವ್ಯಾಪಾರಿಗಳಿಂದ ಗ್ರಂಥಾಲಯ ಮೈದಾನ ಒತ್ತುವರಿ
Team Udayavani, Oct 25, 2019, 2:56 PM IST
ಸೈದಾಪುರ: ಹೆಸರಿಗೆ ಮಾತ್ರ ಗ್ರಂಥಾಲಯವಿದೆ. ಆದರೆ ಒಳಗಡೆ ನೋಡಿದರೆ ಪುಸ್ತಕಗಳೇ ಇಲ್ಲ. ಕುರ್ಚಿ, ಮೇಜು ಹಾಗೂ ಮುಚ್ಚಿರುವ ಅಲ್ಮೇರಾಗಳು ಕಾಣದ ಸ್ಥಿತಿಯಲ್ಲಿ ಧೂಳು ತುಂಬಿರುವುದೇ ಕಣ್ಣಿಗೆ ರಾಚುತ್ತದೆ.
ಜಾಗ ಒತ್ತುವರಿ: ಇದು ಇಲ್ಲಿನ ಸಾರ್ವಜನಿಕ ಗ್ರಂಥಾಲಯ ದುಸ್ಥಿತಿ. ಪಟ್ಟಣದ ಜನಭರಿತ ಪ್ರದೇಶದಲ್ಲಿ ಒಂದಾಗಿರುವ ರೈಲ್ವೆ ನಿಲ್ದಾಣ ಪಕ್ಕದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಶಿಥಿಲಾವಸ್ಥೆಯಿಂದ ಕೂಡಿದ್ದು, ಸುತ್ತಮುತ್ತಲಿನ ಪ್ರದೇಶವನ್ನು ಬೀದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಗ್ರಂಥಾಲಯ ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿದೆ.
ಅನುಕೂಲ ಕಲ್ಪಿಸಿ: ಸೈದಾಪುರ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪ್ರಾಥಮಿಕ, ಪ್ರೌಢ, ಪದವಿ ಸೇರಿದಂತೆ ವೃತ್ತಿ ಶಿಕ್ಷಣ ಕಾಲೇಜಿನ ನೂರಾರೂ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಅವರ ಅನುಕೂಲಕ್ಕೆ ತಕ್ಕಂತೆ ಗ್ರಂಥಾಲಯ ಸ್ಥಳಾಂತರ ಮಾಡಿ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಸೌಲಭ್ಯ ದೊರಕುವಂತಾಗಬೇಕು. ಇದನ್ನು ಪರಿಗಣಿಸಿ ನಾಗರಿಕರ ಹಿತದೃಷ್ಟಿಯಿಂದ ಸ್ಥಳಾಂತರ ಮಾಡುವಂತೆ ಪಂಚಾಯತಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಇಲ್ಲಿನ ಜನರ ಅಳಲು.