11ನೇ ಶತಮಾನದ ಕನ್ನಡ ಶಿಲಾ ಶಾಸನ ಪತ್ತೆ
Team Udayavani, Jan 2, 2020, 12:15 PM IST
ಶಹಾಪುರ: ರಾಮೇಶ್ವರ ದೇವಸ್ಥಾನದ ಪರಿಚಾರಕರಿಗೆ ಕೆಲವೊಂದು ದತ್ತಿಗಳನ್ನು ಶಿವಪೂಜೆ ಹೆಸರಿನಲ್ಲಿ ಕೊಟ್ಟಿರುವುದನ್ನು ಶಾಸನವೊಂದರಲ್ಲಿ ಉಲ್ಲೇಖೀಸಲಾಗಿದೆ ಎಂದು ಸಂಶೋಧಕ, ಸುರಪುರ ಖಜಾನೆ ಇಲಾಖೆ ಸಹಾಯಕ ಖಜಾನಾಧಿಕಾರಿ ಡಾ| ಎಂ.ಎಸ್. ಶಿರವಾಳ ತಿಳಿಸಿದ್ದಾರೆ.
ತಾಲೂಕಿನ ದೋರನಹಳ್ಳಿ ಗ್ರಾಮದ ರಾಮೇಶ್ವರ ದೇವಸ್ಥಾನದ ಪರಿಚಾರಕರಿಗೆ ನೀಡಲಾದ ದತ್ತಿ ವಿಷಯ ಕುರಿತು ಈ ಶಾಸನದಲ್ಲಿ ಉಲ್ಲೇಖೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಶಿಲಾ ಶಾಸನವು ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಪ್ರಾಂಗಣದಲ್ಲಿ ಹೂತು ಹೋಗಿತ್ತು. ಕೆಂಪು ಗ್ರಾನೈಟ್ ಕಲ್ಲಿನ ಮೂರು ಅಡಿ ಅಗಲ ಮತ್ತು ನಾಲ್ಕು ಅಡಿ ಉದ್ದದ ಕ್ರಿ.ಶ 11ನೇ ಶತಮಾನದ ಹಳೆಗನ್ನಡ ಭಾಷಾ ಲಿಪಿಯಲ್ಲಿರುವ ಶಾಸನ ಇದಾಗಿದೆ. ಶಾಸನದಲ್ಲಿರುವ ಲಿಪಿ ಕುರಿತು ಅಧ್ಯಯನ ನಡೆಸಿ ಅವರು ಮಾಹಿತಿ ನೀಡಿದ್ದಾರೆ.
ದೋರನಹಳ್ಳಿ ಕ್ಷೇತ್ರದಾದ್ಯಂತ ಸಂಶೋಧನಾ ಕಾರ್ಯ ಕೈಗೊಂಡ ಅವರು, ಮಣ್ಣಲ್ಲಿ ಮುಳುಗಿ ಹೋಗಿದ್ದ ಈ ಶಾಸನವನ್ನು ಹಲವರ ಸಹಾಯದಿಂದ ಪತ್ತೆ ಮಾಡಿರುವುದಾಗಿ ತಿಳಿಸಿದ್ದಾರೆ.