ಮಳೆ ಅಬ್ಬರಕ್ಕೆ ತರಕಾರಿ ಸಂತೆ ಅಸ್ತವ್ಯಸ್ತ
Team Udayavani, Jul 29, 2019, 4:11 PM IST
ಶಹಾಪುರ: ಸಗರ ಗ್ರಾಮದಲ್ಲಿ ಮಳೆ ನೀರಿಗೆ ಬೀದಿ ಪಾಲಾದ ತರಕಾರಿ
ಶಹಾಪುರ: ರವಿವಾರ ಮಧ್ಯಾಹ್ನ ಸುರಿದ ಮಳೆಗೆ ತರಕಾರಿ ನೆಲಕ್ಕುರುಳಿ ಅಪಾರ ನಷ್ಟವಾದ ಘಟನೆ ತಾಲೂಕಿನ ಸಗರ ಗ್ರಾಮದಲ್ಲಿ ನಡೆದಿದೆ.
ವಾರದ ಸಂತೆಯಲ್ಲಿ ತರಕಾರಿ ವ್ಯಾಪಾರಿಗಳು ಅಪಾರ ಪ್ರಮಾಣದ ತರಕಾರಿ ಮಾರಾಟಕ್ಕಾಗಿ ತಂದಿದ್ದರು. ಕೆಲ ಹೊತ್ತಿನಲ್ಲೆ ಮಳೆ ಸುರಿದ ಹಿನ್ನೆಲೆಯಲ್ಲಿ ಮೆಂತೆ, ಪಾಲಕ, ತಮಟೆ ಸೇರಿದಂತೆ ಇತರೆ ಕಾಯಿ ಪಲ್ಯೆ ಮಳೆ ನೀರಲ್ಲಿ ಕೊಚ್ಚಿ ಹೋಗಿದೆ. ಇದರಿಂದಾಗಿ ತರಕಾರಿ ಮಳೆ ನೀರಲ್ಲಿ ನೆನೆದ ಪರಿಣಾಮ ಸಂತೆಯಲ್ಲಿ ವ್ಯಾಪಾರಿಗಳು ಕಡಿಮೆ ದರದಲ್ಲಿ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಯಿತು.
ಸಂಚಾರ ಅಸ್ತವ್ಯಸ್ತ: ಮಳೆ ಅವಾಂತರದಿಂದ ವಾರದ ಸಂತೆ ನಷ್ಟ ಅನುಭವಿಸಿದ್ದಲ್ಲದೆ, ಗ್ರಾಮದಲ್ಲಿ ಸಂಚಾರಕ್ಕೆ ಅಡೆತಡೆಯುಂಟಾಯಿತು. ಗ್ರಾಮದ ಚರಂಡಿ ಸ್ವಚ್ಛಗೊಳಿಸದ ಹಿನ್ನೆಲೆ ಚರಂಡಿ ತುಂಬಿ ನೀರು ರಸ್ತೆ ಆವರಿಸಿದ್ದು, ಬೈಕ್ ಸವಾರರು ಮತ್ತು ಆಟೋ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.
ಸ್ಥಳೀಯ ಗ್ರಾಪಂ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ಅವಾಂತರಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಳೆ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯದೇ ರಸ್ತೆ ಮೇಲೆ ಹರಿಯುತ್ತಿರುವ ಕಾರಣ ಸಂಚಾರಕ್ಕೆ ತೊಂದರೆಯಾಯಿತು ಎಂದು ಜನರು ದೂರಿದರು. ರಸ್ತೆ ತುಂಬೆಲ್ಲ ಹರಡಿದ ತ್ಯಾಜ್ಯ ಮತ್ತು ನೀರಿನಿಂದ ಬೈಕ್ ಸವಾರರು ಆತಂಕದಿಂದಲೇ ಸಾಗುವಂತಾಯಿತು. ಇದೇ ವೇಳೆ ಚರಂಡಿ ತ್ಯಾಜ್ಯ ವಿಲೇವಾರಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.