ಊಟ ಸೇವಿಸಿದ 35 ಮಂದಿ ಅಸ್ವಸ್ಥ
Team Udayavani, May 27, 2019, 6:00 AM IST
ಸಾಂದರ್ಭಿಕ ಚಿತ್ರ.
ಶಿಕಾರಿಪುರ: ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡು ಊಟ ಮಾಡಿದ್ದ ಸುಮಾರು 35 ಜನ ಅಸ್ವಸ್ಥರಾದ ಘಟನೆ ತಾಲೂಕಿನ ಎ.ಅಣ್ಣಾಪುರ ಗ್ರಾಮದಲ್ಲಿ ನಡೆದಿದೆ.
ಸಮೀಪದ ಎ.ಅಣ್ಣಾಪುರ ಗ್ರಾಮದ ಗಣೇಶ ಶೆಟ್ಟರ್ ಎಂಬುವರ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿಯ ಪೂಜೆ ಆಯೋಜಿಸಲಾಗಿತ್ತು. ಪೂಜೆಯ ನಂತರ ಊಟ ಮಾಡಿದ 35 ಜನರು ಅಸ್ವಸ್ಥರಾಗಿದ್ದಾರೆ. ವಿಷಯ ತಿಳಿದು ವೈದ್ಯಾಧಿಕಾರಿಗಳು ಗ್ರಾಮಕ್ಕೆ ತೆರಳಿ ಎಲ್ಲರ ಪರೀಕ್ಷೆ ನಡೆಸಿದ್ದಾರೆ.
ಅಸ್ವಸ್ಥರನ್ನು ಆ್ಯಂಬುಲೆನ್ಸ್ ಮೂಲಕ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ ನಾಗಲೀಕರ್, ‘ಎಲ್ಲರೂ ಅಪಾಯದಿಂದ ಪಾರಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಪೂರಕವಾದ ಔಷಧಿ ವ್ಯವಸ್ಥೆಯಿರುವುದರಿಂದ ಎಲ್ಲರೂ ಆರೋಗ್ಯವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ. ಸಾಮೂಹಿಕ ಭೋಜನ ಏರ್ಪಡಿಸುವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಅನಾರೋಗ್ಯ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು’ ಎಂದರು.
ಡೀಸಿ ಭೇಟಿ: ಈ ನಡುವೆ, ಪ್ರವಾಸದಲ್ಲಿದ್ದ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.