ಬಿಎಸ್ ವೈಗೆ ಗೊಂದಲವಿಲ್ಲದೆ ಕೆಲಸ ಮಾಡಲು ಬಿಡಿ: ಆಯನೂರು ಹೊಸ ಬಾಂಬ್
Team Udayavani, Nov 10, 2019, 2:10 PM IST
ಶಿವಮೊಗ್ಗ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಗೊಂದಲ ಮಾಡದಿದ್ದರೆ ಇನ್ನಷ್ಟು ಅಭಿವೃದ್ಧಿ ಮಾಡುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿಕೆ ನೀಡಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಹಸುವಲ್ಲ ಅವರು ಹೋರಿ. ಅವರಿಗೆ ಗೊಂದಲವಿಲ್ಲದೆ ಕೆಲಸ ಮಾಡಲು ಬಿಡಬೇಕು ಎಂದರು.
ಆಯನೂರು ಮಂಜುನಾಥ್ ಅವರ ಈ ಮಾತುಗಳು ಬಿಎಸ್ ವೈ ಅವರಿಗೆ ಆಡಳಿತ ನಡೆಸಲು ಸ್ವಪಕ್ಷದ ನಾಯಕರೇ ಗೊಂದಲ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟುಹಾಕಿದೆ.
ಮುಂದುವರಿದು ಮಾತನಾಡಿದ ಅವರು, ಸಂಸದ ಬಿ.ವೈ .ರಾಘವೇಂದ್ರ ಚಿಕ್ಕವಯಸ್ಸಿಗೆ ಮೂರು ಬಾರಿ ಸಂಸದರಾಗಿದ್ದಾರೆ. ಅವರು ರಾಷ್ಟ್ರ ರಾಜಕಾರಣದಲ್ಲಿಯೇ ಮುಂದುವರಿಯಲಿ, ರಾಜ್ಯ ರಾಜಕಾರಣಕ್ಕೆ ಬರುವುದು ಬೇಡ ಎಂದರು. ನಾನು ಮುಖ್ಯಮಂತ್ರಿಯಾಗ ಬೇಕೆಂದಿದ್ದೇನೆ ಹೀಗಾಗಿ ರಾಘವೇಂದ್ರ ರಾಷ್ಟ್ರ ರಾಜಕಾರಣದಲ್ಲಿಯೇ ಇರಲಿ ಎಂದು ಆಯನೂರು ಮಂಜುನಾಥ್ ಹಾಸ್ಯ ಚಟಾಕಿ ಹಾರಿಸಿದರು.