ಹೊಸ ಶೌಚಾಲಯ ನಿರ್ಮಾಣ ಪಟ್ಟಿ ಸಿದ್ಧ
Team Udayavani, Nov 30, 2018, 5:06 PM IST
ಶಿವಮೊಗ್ಗ: ಜಿಲ್ಲೆಯನ್ನು 2012ರ ಬೇಸ್ಲೆ„ನ್ ಸರ್ವೆ ಪ್ರಕಾರ ಬಯಲು ಶೌಚಾಲಯ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದ್ದು, ಈಗ ಹೊಸದಾಗಿ 11540 ಶೌಚಾಲಯಗಳ ನಿರ್ಮಾಣಕ್ಕಾಗಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯ
ನಿರ್ವಹಣಾಧಿಕಾರಿ ಶಿವರಾಮೇ ಗೌಡ ತಿಳಿಸಿದರು. ಗುರುವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ಮಾರ್ಗಸೂಚಿ ಪ್ರಕಾರ ಶೇ.80ಕ್ಕೂ ಅಧಿಕ ಶೌಚಾಲಯ ಸಂಪರ್ಕ ಹೊಂದಿರುವ ಜಿಲ್ಲೆಗಳನ್ನು ಸಂಪೂರ್ಣ ಬಯಲು ಶೌಚಾಲಯ ಮುಕ್ತ ಜಿಲ್ಲೆಗಳೆಂದು ಘೋಷಿಸಲಾಗಿದೆ. ಆದರೂ ಹೊಸದಾಗಿ ಶೌಚಾಲಯಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಹೊಸ ಸಮೀಕ್ಷೆ ಕಾರ್ಯ ನಡೆಸಲಾಗಿತ್ತು. 11540 ಶೌಚಾಲಯ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಗತ್ಯವಿದ್ದಲ್ಲಿ ಇನ್ನಷ್ಟು ಶೌಚಾಲಯಗಳನ್ನು ನಿರ್ಮಿಸಬಹುದಾಗಿದೆ ಎಂದು ಅವರು ಹೇಳಿದರು.
ಪರಿಹಾರಕ್ಕೆ ಪ್ರಸ್ತಾವನೆ: ಇತ್ತೀಚಿಗೆ ಹೊಸನಗರ ತಾಲೂಕಿನ ತಮ್ಮಡಿಕೊಪ್ಪ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಅಂಗನವಾಡಿಯಲ್ಲಿ ಹಾವು ಕಡಿದು ಮಗು ಸಾವಿಗೀಡಾದ ಪ್ರಕರಣದಲ್ಲಿ ಪರಿಹಾರ ಒದಗಿಸಲು ಕೋರಿ ಸರ್ಕಾರಿ ಜಿಪಂ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಿವರಾಮೇ ಗೌಡ ತಿಳಿಸಿದರು.
ಮಗುವಿನ ಆಕಸ್ಮಿಕ ಸಾವಿಗೆ ಪ್ರತಿಯೊಬ್ಬರೂ ಜವಾಬ್ದಾರರು. ಶಾಲೆಗಳಲ್ಲಿ ಈ ರೀತಿಯ ಅವಘಡ ಸಂಭವಿಸಿದರೆ ಒಂದು ಲಕ್ಷ ರೂ. ಪರಿಹಾರ ನೀಡಲಾಗುತ್ತಿದ್ದು, ಅದೇ ರೀತಿ ಈ ಮಗುವಿಗೂ ಪರಿಹಾರ ಒದಗಿಸಬೇಕು. ಜಿಲ್ಲೆಯಲ್ಲಿ 220 ಅಂಗನವಾಡಿಗಳು ಇಂತಹ ಬಾಡಿಗೆ ಕಟ್ಟಡದಲ್ಲಿ ದುಸ್ಥಿತಿಯಲ್ಲಿ ನಡೆಯುತ್ತಿವೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸದಸ್ಯೆ ಶ್ವೇತಾ ಬಂಡಿ ಒತ್ತಾಯಿಸಿದರು.
ಶಾಲಾ ಕೊಠಡಿ ದುರಸ್ತಿ: ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಕೊಠಡಿಗಳ ದುರಸ್ತಿಗಾಗಿ 1.65 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು ಇದನ್ನು ಸಂಬಂಧಿಸಿದ ಅನುಷ್ಠಾನಾಧಿ ಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿವೆ ಎಂದು ಡಿಡಿಪಿಐ ಅವರು ಸಭೆಗೆ ಮಾಹಿತಿ ನೀಡಿದರು.
ಮರಳು ಸಮಸ್ಯೆ ಪ್ರಸ್ತಾಪ: ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಮನೆ ಕಟ್ಟಲು ಮರಳು ಸುಲಭವಾಗಿ ಸಿಗುತ್ತಿಲ್ಲ ಎಂದು ಸದಸ್ಯರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಅನಧಿಕೃತ ಮರಳುಗಾರಿಕೆ ಮೇಲೆ ನಿಯಂತ್ರಣ ಹೇರದೆ ಜನಸಾಮಾನ್ಯರು ಎತ್ತಿನಗಾಡಿ, ಟ್ರಾಕ್ಟರ್ಗಳಲ್ಲಿ ಮರಳು ಸಾಗಿಸಿದರೆ ಹಿಡಿದು ದಂಡ ವಿಧಿ ಸಲಾಗುತ್ತಿದೆ ಎಂದು ಸದಸ್ಯರು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂ ವಿಜ್ಞಾನಾಕಾರಿ ವಿಂಧ್ಯಾ, ಸರ್ಕಾರದ ವಿವಿಧ ಯೋಜನೆಗಳ ಅಡಿ ಮನೆ ನಿರ್ಮಾಣಕ್ಕೆ ಟ್ರಾಕ್ಟರ್, ಎತ್ತಿನಗಾಡಿ, ಅಟೋಗಳಲ್ಲಿ ಮರಳು ಸಾಗಾಟಕ್ಕೆ ಯಾವುದೇ ಅಡ್ಡಿ ಉಂಟು ಮಾಡುತ್ತಿಲ್ಲ. ಅಕ್ರಮ ಮರಳುಗಾರಿಕೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು 5 ಲಕ್ಷ ರೂ. ವಸೂಲು ಮಾಡಿ ಇಲಾಖೆ ವತಿಯಿಂದ 2 ಎಫ್ಐಆರ್ ದಾಖಲಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಮನೆಗಳ ನಿರ್ಮಾಣಕ್ಕೆ ಸ್ಥಳೀಯ ಪಿಡಿಒ ಅವರಿಂದ ಪ್ರಮಾಣ ಪತ್ರ ಹೊಂದಿರುವವರು ಮರಳು
ಸಾಗಾಟಕ್ಕೆ ಅಡ್ಡಿ ಉಂಟು ಮಾಡದಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಶಿವರಾಮೇಗೌಡ ಅವರು ತಿಳಿಸಿದರು.
ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು
BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ