ಬಹುಗ್ರಾಮ ನೀರಿನ ಯೋಜನೆ ಬೇಡ ಎನ್ನುವವರ ಹಿಂದೆ ಯಾರೋ ಇದ್ದಾರೆ: ಟಿ.ಜೆ ಅನಿಲ್
Team Udayavani, Feb 1, 2024, 4:28 PM IST
ತೀರ್ಥಹಳ್ಳಿ : ಬಹುಗ್ರಾಮ ನೀರಿನ ಯೋಜನೆ ಅವೈಜ್ಞಾನಿಕ ಎಂದು ಕೆಲವರು ಸಚಿವರ ಬಳಿ ಮನವಿ ಕೊಟ್ಟು ಯೋಜನೆ ರದ್ದು ಮಾಡಲು ಹೊರಟಿದ್ದಾರೆ. ಈ ಯೋಜನೆಯಲ್ಲಿ ಭ್ರಷ್ಟಾಚಾರ ಆಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಆ ಯೋಜನೆ ಬಗ್ಗೆ ತಿಳಿಯದೆ ಇವರೇ ಇಂಜಿನಿಯರ್ ಆಗುತ್ತಿದ್ದಾರೆ. ಇದು ಯಾರಿಗೆ ಲಾಭ ಆಗುತ್ತಿದೆ ಗೊತ್ತಿಲ್ಲ ಆದರೆ ಇದರ ಹಿಂದೆ ಯಾರೋ ಇದ್ದಾರೆ ಎಂದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷರಾಗಿರುವ ಟಿ. ಜೆ ಅನಿಲ್ ಹೇಳಿದರು.
ಗುರುವಾರ ಪಟ್ಟಣದ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರ ಈಗಾಗಲೇ ಜಾಗವನ್ನು ಬದಲಾವಣೆ ಮಾಡಿ ದೊಡ್ಡಿನಮನೆಯಲ್ಲಿ ಜಾಕ್ ವೆಲ್ ಮಾಡಲು ತೀರ್ಮಾನಿಸಿದೆ. ಆದರೆ ಟ್ರೀಟ್ ಮೆಂಟ್ ಪ್ಲಾಂಟ್ ಕೂಡ ಬದಲಾವಣೆ ಮಾಡಲು ಕೆಲವರು ಹೇಳುತ್ತಿದ್ದಾರೆ. ಇದು ವೀಕೆಂದ್ರಿಕರಣ ವ್ಯವಸ್ಥೆಗೆ ಹೊಡೆತ ಬೀಳಲಿದೆ. ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಟ್ರೀಟ್ ಮೆಂಟ್ ಪ್ಲಾಂಟ್ ಕಟ್ಟಿ ನೀರು ಕೊಡಲು ಹೇಳುತ್ತಾರೆ. ಇರುವ ಟ್ರೀಟ್ ಮೆಂಟ್ ಪ್ಲಾಂಟ್ ಸರಿಪಡಿಸಲು ಆಗುತ್ತಿಲ್ಲ ಎಂದರು.
ನಮ್ಮ ಬಳಿ ನೀರಿಲ್ಲ. ಪ್ರತಿಯೊಂದು ಗ್ರಾಮಪಂಚಾಯಿತಿ ಕೂಡ ಪ್ರತಿ ತಿಂಗಳು ಬೋರ್ ಗಾಗಿ 1 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡುತ್ತಿದ್ದೇವೆ. ಈ ವಿಷಯದಲ್ಲಿ ಇಲ್ಲಿಯವರೆಗೆ ಜಾಸ್ತಿ ಒತ್ತಡ ಹಾಕಿಲ್ಲ, ಇನ್ನು ಮುಂದೆ ಹೋರಾಟ ಮಾಡುವುದಾದರೂ ಸರಿ, ಹಾಗೂ ಸಚಿವರ ಬಳಿ ಮನವಿ ಸಲ್ಲಿಸುವುದಾದರು ಸರಿ, ಒಟ್ಟಿನಲ್ಲಿ ಈ ವಿಚಾರದಲ್ಲಿ ರೈತರ ಮುಗ್ದತೆ ಬಳಸಿ ಯಾರೋ ಲಾಭ ಮಾಡಿಕೊಳ್ಳಿತ್ತಿದ್ದಾರೆ , ಇದು ತಾಲೂಕಿನ ಜನತೆಗೆ ಮಾಡುತ್ತಿರುವ ದ್ರೋಹ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ನಂಬಳ ಮುರುಳಿ, ಬಂಡೆ ವೆಂಕಟೇಶ್, ರಾಘವೇಂದ್ರ ಪವಾರ್, ಸುಪ್ರಿತಾ, ಜಯಪ್ರಕಾಶ್, ಚಂದ್ರಶೇಖರ, ನಾಗರಾಜ್ ಸೆರಿದಂತೆ ಅನೇಕ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.