ರಂಗಕಲೆಯಿಂದ ಆತ್ಮ ಶಕ್ತಿ
ರಂಗಾಸಕ್ತಿ ಬೆಳೆಸಿಕೊಳ್ಳಲು ಯುವಕರಿಗೆ ರಂಗ ನಿರ್ದೇಶಕ ರಘುನಂದನ್ ಕರೆ
Team Udayavani, Oct 12, 2019, 6:16 PM IST
ಶಿವಮೊಗ್ಗ: ರಂಗಕಲೆ ಮನುಷ್ಯನಿಗೆ ಬೇಕಾದ ಆತ್ಮಶಕ್ತಿಯನ್ನು ತಂದುಕೊಡುತ್ತದೆ ಎಂದು ಹಿರಿಯ ರಂಗ ನಿರ್ದೇಶಕ ರಘುನಂದನ್
ಅಭಿಪ್ರಾಯಪಟ್ಟರು.
ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ರಂಗ ಕಮ್ಮಟ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಯುವಕರು ರಂಗಾಸಕ್ತಿಯನ್ನು ಬೆಳೆಸಿಕೊಳ್ಳುವ ಅವಶ್ಯಕತೆ ಇದೆ. ರಂಗ ಕ್ಷೇತ್ರ ಯುವಕರಿಗೆ ಬೇಕಾದಂತಹ ಎಲ್ಲಾ ಜ್ಞಾನವನ್ನು ಕಲಿಸಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಯುವ ಸಮೂಹ ರಂಗ ಕ್ಷೇತ್ರದ ಕಡೆ ಹೆಚ್ಚಿನ ಒಲವು ತೋರಬೇಕೆಂದು ಕರೆ ನೀಡಿದರು.
ರಂಗಕ್ಷೇತ್ರ ಒಂದು ರೀತಿ ಸಮುದ್ರವಿದ್ದಂತೆ. ಸಾಕಷ್ಟು ವಿಷಯಗಳು ಇಲ್ಲಿಂದ ದೊರಕುತ್ತವೆ. ಮನುಷ್ಯ ಸ್ವಾಭಿಮಾನದಿಂದ ಮತ್ತು ಆತ್ಮಾಭಿಮಾನದಿಂದ ಬದುಕುವುದನ್ನು ಈ ಕ್ಷೇತ್ರ ಕಲಿಸಿಕೊಡುತ್ತದೆ ಎಂದರು.
ಭಾಸ್ಕರ್ ಟಿ.ಪಿ. ಮಾತನಾಡಿ, ರಂಗ ಕಲೆ ಪ್ರತಿಯೊಬ್ಬ ಮನುಷ್ಯನಿಗೆ
ಉತ್ತಮ ಸಂಸ್ಕಾರ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಕೇವಲ ಅಂಕ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಆದರೆ ಪಠ್ಯೇತರ ಚಟುವಟಿಕೆಗಳ ಕಡೆ ಆಸಕ್ತಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದರು. ರಂಗಕ್ಷೇತ್ರ ಯುವ ಸಮೂಹಕ್ಕೆ ಬದುಕುವ ಹಾಗೂ ಜೀವನದ ಕೌಶಲ್ಯಗಳನ್ನು ಕಲಿಸಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಯುವಕರು ರಂಗಕ್ಷೇತ್ರದತ್ತ ಒಲವು ತೋರಿಸಬೇಕಾಗಿದೆ. ಅವರನ್ನು ಈ ಕ್ಷೇತ್ರಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಅವರುಗಳಿಗೆ ಒಂದಿಷ್ಟು ಮಾಹಿತಿ ನೀಡುವ ಅವಶ್ಯಕತೆ ಇದೆ ಎಂದರು.
ಸಮಾರಂಭದಲ್ಲಿ ರಂಗ ಬೆಳಕಿನ ಕೊಟ್ರಪ್ಪ ಜಿ. ಹಿರೇಮಾಗಡಿ, ಭಾಷಾ ಶಾಸ್ತ್ರ ವಿಭಾಗದ ಡಾ| ಮೇಟಿ ಮಲ್ಲಿಕಾರ್ಜುನ್ ಮತ್ತಿತರರು ಇದ್ದರು. ಪ್ರಾಂಶುಪಾಲ ಡಾ| ಕೆ.ಬಿ. ಧನಂಜಯ ಅಧ್ಯಕ್ಷತೆ ವಹಿಸಿದ್ದರು.