ಎಳ್ಳಮಾವಾಸ್ಯೆ ಜಾತ್ರೆ ಭಕ್ತರಿಂದ ತೀರ್ಥಸ್ನಾನ
Team Udayavani, Dec 27, 2019, 3:15 PM IST
ತೀರ್ಥಹಳ್ಳಿ: ಮಲೆನಾಡಿನ ಪ್ರತಿಷ್ಠಿತ ಎಳ್ಳಮಾವಾಸ್ಯೆ ಜಾತ್ರೆಯ ಮೊದಲ ದಿನದ ಕಾರ್ಯಕ್ರಮವಾಗಿ ಇಲ್ಲಿನ ತುಂಗಾನದಿಯ ನಡುವಿನ ಶ್ರೀರಾಮ ಕೊಂಡದಲ್ಲಿ ಸಾವಿರಾರು ಭಕ್ತಾದಿಗಳು ತೀರ್ಥಸ್ನಾನ ಮಾಡುವುದರೊಂದಿಗೆ ಜಾತ್ರೆಗೆ ಚಾಲನೆ ನೀಡಿದರು.
ತಾಲೂಕಿನ ನಾಡ ದೇವತೆ ಎಂದೇ ಹೆಸರಾಗಿರುವ ಶ್ರೀರಾಮೇಶ್ವರ ದೇವರ ಸನ್ನಿ ಧಿಯಲ್ಲಿ ನಡೆಯುವ ಎಳ್ಳಮಾವಾಸ್ಯೆ ಜಾತ್ರೆಯ ತೀರ್ಥಸ್ನಾನವಿಂದು ಸೂರ್ಯಗ್ರಹಣ ಇರುವುದರಿಂದ 11ಗಂಟೆಯ ನಂತರ ಭಕ್ತಾ ದಿಗಳು ಸಾಲುಸಾಲಾಗಿ ಬಂದು ತೀರ್ಥಸ್ನಾನದಲ್ಲಿ ಪಾಲ್ಗೊಂಡಿದ್ದರು. ತುಂಗಾನದಿಯ ಸುತ್ತಮುತ್ತ ಬಿಗಿ ಪೊಲೀಸ್ ಹಾಗೂ ಗೃಹರಕ್ಷಕ ದಳದ ಭದ್ರತೆ ಆಯೋಜಿಸಲಾಗಿತ್ತು.
ಇಂದಿನ ತೀರ್ಥಸ್ನಾನಕ್ಕೆ ಹೊರಜಿಲ್ಲೆ ಹಾಗೂ ಬೇರೆ ಊರುಗಳಿಂದಲೂ ಭಕ್ತಾ ದಿಗಳು ಆಗಮಿಸಿದ್ದರು. ತೀರ್ಥಸ್ನಾನದ ಶ್ರೀರಾಮ ಕೊಂಡಕ್ಕೆ ಮುಜರಾಯಿ ಅಧಿಕಾರಿ ತಹಶೀಲ್ದಾರ್ ಎಂ.ಭಾಗ್ಯ, ಶಾಸಕ ಆರಗ ಜ್ಞಾನೇಂದ್ರ ಹಾಗೂ ಶ್ರೀರಾಮೇಶ್ವರ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶ್ರೀರಾಮೇಶ್ವರ ದೇವಾಲಯದ ಪಕ್ಕದ ಶ್ರೀರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಭಕ್ತಾ ದಿಗಳಿಗೆ ಶ್ರೀ ರಾಮೇಶ್ವರ ಅನ್ನದಾಸೋಹ ಸಮಿತಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.