Ayodhya ರಾಮಮಂದಿರದ ಮೂಲಕ ಶತ ಶತಮಾನಗಳ ಕನಸು ನನಸು
ಪವಿತ್ರ ದಿನವನ್ನು ಧಾರ್ಮಿಕವಾಗಿ ಆಚರಿಸಲು ಪೇಜಾವರ ಶ್ರೀ ಕರೆ
Team Udayavani, Dec 12, 2023, 12:26 AM IST
ತುಮಕೂರು: ಶ್ರೀರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗುವ ಮೂಲಕ ಶತ ಶತಮಾನಗಳ ಕನಸು ನನಸಾಗುತ್ತಿದೆ. ಈ ಸಂದರ್ಭವನ್ನು ದೇಶದ ಜನರು ಭಕ್ತಿ, ಸಂಭ್ರಮದಿಂದ ಸ್ಮರಣೀಯವಾಗಿಸಿಕೊಳ್ಳಬೇಕು ಎಂದು ಶ್ರೀರಾಮ ಜನ್ಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಟ್ರಸ್ಟಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದರು.
ನಗರದ ಶ್ರೀ ರಾಮಮಂದಿರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು ತಾಲೂಕು ಮುಖಂಡರಿಗೆ ವಿತರಿಸಿ ಅವರು ಮಾತನಾಡಿದರು.
ಅಯೋಧ್ಯೆ ರಾಮಮಂದಿರದಲ್ಲಿ ಜನವರಿ 22ರಂದು ಶ್ರೀರಾಮ ಮೂರ್ತಿಯ ಶಿಲಾಬಿಂಬ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಅಂಥವರು ತಮ್ಮ ಗ್ರಾಮಗಳ ದೇವಸ್ಥಾನಗಳಲ್ಲಿ ಪೂಜೆ, ಹೋಮ, ಹವನ ಮುಂತಾದವುಗಳ ಮೂಲಕ ಪವಿತ್ರ ಸಂದರ್ಭವನ್ನು ಸ್ಮರಣೀಯವಾಗಿಸಿಕೊಳ್ಳಿ ಎಂದು ಹೇಳಿದರು. ಪ್ರಮುಖರು ಉಪಸ್ಥಿತರಿದ್ದರು.