ಹದಗೆಟ್ಟ ರಸ್ತೆ ದುರಸ್ತಿ ಗೊಳಿಸಲು ಆಗ್ರಹ
Team Udayavani, Oct 22, 2019, 4:24 PM IST
ತಿಪಟೂರು: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ತಿಪಟೂರು ಅಮಾನಿಕೆರೆ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗುಂಡಿಗಳಿಂದ ತುಂಬಿದೆ. ಮಳೆ ಸುರಿದರೆ ಕೆಸರು ಗದ್ದೆಯಂತಾಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಯುಂಟಾಗುತ್ತಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಅಧಿಕಾರಿಗಳು ರಸ್ತೆ ದುರಸ್ತಿಗೊಳಿಸಬೇಕು ಎಂದು ವಾಹನ ಸವಾರರು ಹಾಗೂ ಪಾದಚಾರಿಗಳು ಒತ್ತಾಯಿಸಿದ್ದಾರೆ.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಿ.ಎಚ್.ರಸ್ತೆಯಿಂದಲೂ ತೆರಳಬಹುದು. ಆದರೆ ಟ್ರಾಫಿಕ್ ಸಮಸ್ಯೆಯಿಂದ ಬಸ್ ನಿಲ್ದಾಣಕ್ಕೆ ಸಾರಿಗೆ ಬಸ್ಗಳಿಗೆ ಪ್ರತ್ಯೇಕ ಬೈಪಾಸ್ ರಸ್ತೆ ಕೆರೆಯ ಏರಿಯ ಮೇಲೆ ಕಲ್ಪಿಸಲಾಗಿದೆ. ರಸ್ತೆ ಹೊಸದಾಗಿ ಡಾಂಬರೀಕರಣ ಮಾಡಿದ್ದರೂ ನಿಲ್ದಾ ಣದ ಸಮೀಪದಲ್ಲಿ ರಸ್ತೆ ಉಬ್ಬು ಹಾಕಲಾಗಿದೆ. ಸಂಪೂರ್ಣ ಡಾಂಬರೂ ಕಿತ್ತು ಹೋಗಿ ಗುಂಡಿಗಳು ಬಿದ್ದಿವೆ. ಮಳೆ ನೀರು ಗುಂಡಿಗಳಿಗೆ ತುಂಬಿಕೊಂಡು, ಎಲ್ಲಿ ಗುಂಡಿಗಳಿವೆ ಎಂಬುದೇ ಕಾಣದಂತಾಗಿದೆ.
ಈ ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿ ಕರು, ವಿದ್ಯಾರ್ಥಿಗಳು, ಕೆಎಸ್ಆರ್ಟಿಸಿ ಖಾಸಗಿ ಬಸ್ಗಳು, ಲಾರಿ, ಟೆಂಪೋ, ಆಟೋ, ದ್ವಿಚಕ್ರ ವಾಹನಗಳು ಓಡಾಡುತ್ತವೆ. ಪ್ರತಿನಿತ್ಯ ಒಂದಲ್ಲೊಂದು ಅವಘಡಗಳು ಸಂಭವಿಸುತ್ತಿದ್ದು, ಸವಾರರಂತೂ ಜೀವವನ್ನು ಕೈಯಲ್ಲಿಡಿದು ಕೊಂಡೆ ವಾಹನ ಚಲಾವಣೆ ಮಾಡುವಂತಾಗಿದೆ. ಅಲ್ಲದೆ ಹಳೇಪಾಳ್ಯ, ಕೆ.ಆರ್.ಬಡಾವಣೆ, ಗಾಯತ್ರಿನಗರ, ಅಣ್ಣಾಪುರ ಪ್ರದೇಶಗಳಿಗೂ ತೆರಳಲು ಜನರು ಇದೇ ರಸ್ತೆ ಅವಲಂಬಿಸಿದ್ದು, ರಸ್ತೆ ಮಾತ್ರ ಸಂಚಾರಕ್ಕೆ ಅಯೋಗ್ಯವಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿ ಗಳು ನಿದ್ದೆಯಿಂದ ಮೇಲೆದ್ದು ಶೀಘ್ರವಾಗಿ ದುರಸ್ತಿ ಕಾಮಗಾರಿ ಕೈಗೊಂಡು ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ವಾಹನ ಸವಾರರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.