ಕಸಾಪ ನಾಡಿನ ಸ್ವಾಭಿಮಾನದ ಪ್ರತೀಕ
Team Udayavani, May 17, 2020, 4:58 AM IST
ಮಧುಗಿರಿ: ಕನ್ನಡ ಸಾಹಿತ್ಯ ಪರಿಷತ್ತು 105ನೇ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದು, ಕನ್ನಡ ನಾಡಿನ ಸ್ವಾಭಿಮಾನದ ಪ್ರತೀಕವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಮಲನ ಮೂರ್ತಿ ಅಭಿಪ್ರಾಯಪಟ್ಟರು. ಪಟ್ಟಣದ ಕನ್ನಡ ಭವನದಲ್ಲಿ ತಾಲೂಕು ಕಸಾಪ ವತಿಯಿಂದ ಆಯೋಜಿಸಿದ್ದ ಕಸಾಪದ 105ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಕನ್ನಡಿ ಗರು ಒಂದೇ ಎನ್ನುವ ಅಸ್ಮಿತೆ ಮೂಡಬೇಕು ಎಂದರು.
ಕಸಾಪ ಕನ್ನಡ ಭಾಷೆ ಉಳಿಸಲು ಹಳಗನ್ನಡ ಕಾವ್ಯ ಪ್ರಕಟಣೆ, ರತ್ನಕೋಶ ಹಾಗೂ ಕನ್ನಡ ನಿಘಂಟು ಹೊರತಂದಿದೆ. ಗ್ರಾಮಗಳ ಮಟ್ಟದಲ್ಲಿ ಭಾಷೆ ಉಳಿಸಲು ಎಲ್ಲ ರೀತಿಯ ಕಾರ್ಯಕ್ಕೆ ಮುಂದಾಗುತ್ತಿದೆ ಎಂದರು. ತಾಲೂಕು ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಮಾತನಾಡಿ, ಕಸಾಪ ಘಟಕದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಬೇಕು ಹಾಗೂ ಕನ್ನಡದ ಸೇವೆ ಮಾಡುವವರನ್ನು ಗುರುತಿಸಿ ಗೌರವಿಸಬೇಕು ಎಂದರು.
ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ, ಧಾರ್ಮಿಕ ಮುಖಂಡ ಡಾ. ಎಂ.ಜಿ. ಶ್ರೀನಿವಾಸಮೂರ್ತಿ, ನಿವೃತ್ತ ಪ್ರಾಂಶುಪಾಲ ಟಿ.ಗೋವಿಂದ ರಾಜು, ಕಸಾಪ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಕಾರ್ಯದರ್ಶಿ ನರಸೇಗೌಡ, ಸದಸ್ಯರಾದ ಲಕ್ಷ್ಮಿ ನರಸಯ್ಯ, ಸುದರ್ಶನ್, ರಂಗನಾಥ್, ಸಿದ್ದರಾಜು, ನರಸಿಂಹಮೂರ್ತಿ, ಮಹಿಳಾಧ್ಯಕ್ಷೆ ಸುಧಾ ಇದ್ದರು.