Kunigal: ಹಾಡಹಗಲೇ ಲಾಂಗ್ ಬೀಸಿದ್ದ ನಾಲ್ವರು ಆರೋಪಿಗಳ ಬಂಧನ
Team Udayavani, Aug 9, 2023, 8:23 PM IST
ಕುಣಿಗಲ್ : ಪಟ್ಟಣದಲ್ಲಿ ಹಾಡಹಗಲೇ ಗುಂಪೊಂದು ವ್ಯಕ್ತಿಯ ಮೇಲೆ ಲಾಂಗಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ನಾಲ್ಕು ಮಂದಿ ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೂತರಹಳ್ಳಿ ಗ್ರಾಮದ ಕೆ.ಡಿ.ಆಕಾಶ್, ಬಿಳಿದೇವಾಲಯ ಗ್ರಾಮದ ಸಾಗರ್, ಚಿಕ್ಕಕಲ್ಯಾ ಗ್ರಾಮದ ರಾಜಣ್ಣ ಅಲಿಯಾಸ್ ಮಚ್ಚುರಾಜು, ಕುಣಿಗಲ್ ಮಾವನಕಟ್ಟೆ ಪಾಳ್ಯ ಆಶ್ರಯ ಕಾಲೋನಿ ಎಂ.ಎಸ್.ಪ್ರಸಾದ್ ಬಂಧಿತ ಆರೋಪಿಗಳು.
ಘಟನೆ ವಿವರ
ಕುಣಿಗಲ್ ಪಟ್ಟಣದ ಮಲ್ಲಾಘಟ್ಟ ಎಲ್ಐಸಿ ಆಫೀಸ್ ಮುಂಭಾಗ ಆ 3 ರಂದು ತಾಲೂಕಿನ ಮೇಸ್ತ್ರಿಗೌಡನಪಾಳ್ಯ ಗ್ರಾಮದ ಜಗದೀಶ್ ಅಲಿಯಾಸ್ ಜಗ ಹಾಗೂ ಆತನ ಸ್ನೇಹಿತ ರೇಣುಕಾ ಅವರು ಟೀ ಅಂಗಡಿ ಬಳಿ ಟೀ ಕುಡಿದು ಕುಣಿಗಲ್ ಕಡೆ ನಡೆದುಕೊಂಡು ಹೊಗುತ್ತಿರುವಾಗ ಕೂತರಹಳ್ಳಿ ಗ್ರಾಮದ ಆರೋಪಿ ಆಕಾಶ್ ಹಳೆ ದ್ವೇಷ ಇಟ್ಟುಕೊಂಡು ಜಗದೀಶ್ ಅಲಿಯಾಸ್ ಜಗ ಎಂಬುವನಿಗೆ ಲಾಂಗ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಆತನ ಸಹಚರರೊಂದಿಗೆ ಪರಾರಿಯಾಗಿದ್ದರು. ಘಟನೆಯಿಂದ ಪಟ್ಟಣದ ನಾಗರಿಕರು ಭಯಭೀತರಾಗಿದ್ದರು.ವಿಡಿಯೋ ಸಾಮಾಜೀಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆರೋಪಿಗಳ ಬಂಧನ
ಪ್ರಕರಣ ದಾಖಲಿಸಿಕೊಂಡು ಕುಣಿಗಲ್ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹುಲ್ಕುಮಾರ್ ಶಹಪುರ್ವಾಡ್, ಎಎಸ್ಪಿ ವಿ.ಮರಿಯಪ್ಪ, ಡಿವೈಎಸ್ಪಿ ಲಕ್ಷ್ಮಿಕಾಂತ್ ಅವರ ಮಾರ್ಗದರ್ಶಿನದಲ್ಲಿ ಸಿಪಿಐ ನವೀನ್ಗೌಡ ಅವರ ನೇತೃತ್ವದ ಪೊಲೀಸ್ ತಂಡ ಬೆಂಗಳೂರು ದಾಬಸ್ಪೇಟೆ, ಕುಣಿಗಲ್ ತಾಲೂಕು ಅಂಚೇಪಾಳ್ಯ, ಮಾವಿನಕಟ್ಟೆಪಾಳ್ಯ ಗ್ರಾಮದ ಬಳಿ ಆರೋಪಿಗಳಾದ ಆಕಾಶ್ ಹಾಗೂ ಹಲ್ಲೆಗೆ ಸಹಕರಿಸಿದ ಸಾಗರ್, ರಾಜು ಅಲಿಯಾಸ್ ಮಚ್ಚುರಾಜ, ಪ್ರಸಾದ್ನನ್ನು ಬಂಧಿಸಿ ಲಾಂಗು, ಕಾರು, ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಕಾನ್ಸ್ಟೇಬಲ್ಗಳಾದ ಮಲ್ಲಿಕಾರ್ಜುನ, ನಟರಾಜು, ಮಂಜು, ನವೀನ, ಯೋಗೀಶ್, ಷಡಾಕ್ಷರಿ ಭಾಗವಹಿಸಿದರು.