ಅರ್ಹ ಫಲಾನುಭವಿಗೆ ಯೋಜನೆ ತಲುಪಲಿ
Team Udayavani, Feb 10, 2022, 3:20 PM IST
ತುಮಕೂರು: ಪ.ಜಾತಿ, ಪಂಗಡದವರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಾಜ್ಯ ವಲಯ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ ಕಾರ್ಯಕ್ರಮಗಳಡಿ ಜನವರಿ 2022ರ ಅಂತ್ಯಕ್ಕೆ ಸಾಧಿಸಲಾದ ಪ್ರಗತಿಗೆ ಸಂಬಂಧಿಸಿದಂತೆ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಪರಿಶಿಷ್ಠರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಕ್ಕಾಗಿ ಇಲಾಖೆಗಳಿಗೆಅನುದಾನವನ್ನು ಒದಗಿಸುತ್ತಿದೆ. ಅರ್ಹರಿಗೆ ಸವಲತ್ತು ಗಳನ್ನು ಒದಗಿಸಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕೆಂದು ಸೂಚಿಸಿದರು.
ಆರ್ಥಿಕ ವರ್ಷ ಅಂತ್ಯ: ಬರುವ ಮಾರ್ಚ್ ಅಂತ್ಯಕ್ಕೆ ಆರ್ಥಿಕ ವರ್ಷ ಅಂತ್ಯವಾಗುತ್ತಿದ್ದು, ಇಲಾಖೆಗಳಿಗೆ ಒದಗಿಸಿರುವ ಅನುದಾನವನ್ನು ಸಮರ್ಪಕವಾಗಿ ಖರ್ಚು ಮಾಡಿ ನಿಗದಿತ ಗುರಿಯನ್ನು ಸಾಧಿಸ ಬೇಕು. ಆ ಮೂಲಕ ಅರ್ಹ ಫಲಾನುಭವಿಗಳಿಗೆಸವಲತ್ತು ತಲುಪಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಶೇ. 77ರಷ್ಟು ಗುರಿ ಸಾಧನೆ: ಪರಿಶಿಷ್ಠ ಜಾತಿಯ ಉಪಯೋಜನೆ, ಗಿರಿಜನ ಉಪಯೋಜನೆಯಡಿ ವಿವಿಧ ಇಲಾಖೆಗಳು ಕೈಗೊಂಡಿರುವ ಕಾರ್ಯ ಕ್ರಮಗಳು, ಅದಕ್ಕೆ ಕಲ್ಪಿಸಿರುವ ಅನುದಾನ ಮತ್ತು ಸಾಧಿಸಿರುವ ಪ್ರಗತಿಯ ಬಗ್ಗೆ ಇಲಾಖಾವಾರು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಸಭೆಗೆ ಮಾಹಿತಿ ನೀಡಿ, ಪರಿಶಿಷ್ಠ ಜಾತಿ ಉಪಯೋಜನೆಯಡಿ ವಿವಿಧ ಇಲಾಖೆಗಳಿಗಾಗಿ 30,767.55 ಲಕ್ಷ ರೂ. ಮೀಸಲಿಟ್ಟು, 19,374.11ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ 14,970.88 ಲಕ್ಷ ರೂ.ಗಳನ್ನು ವಿವಿಧಕಾರ್ಯಕ್ರಮಗಳಡಿ ವ್ಯಯಿಸಲಾಗಿ ಶೇ. 77ರಷ್ಟು ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಅನುದಾನ ಬಿಡುಗಡೆ: ಗಿರಿಜನ ಉಪಯೋಜನೆಯಡಿ 10,336.21 ಲಕ್ಷ ರೂ. ಗಳನ್ನು ಮೀಸಲಿಟ್ಟು 68,58.83 ಲಕ್ಷ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ 5,048.77 ಲಕ್ಷ ರೂ. ಗಳನ್ನು ಇಲಾಖೆಗಳು ವಿವಿಧ ಕಾರ್ಯಕ್ರಮ ಗಳನ್ನು ರೂಪಿಸಿ ವ್ಯಯಿಸಲಾಗಿ ಶೇ.74 ರಷ್ಟುಗುರಿ ಸಾಧಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕೆ ವಿದ್ಯಾಕುಮಾರಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಗೆ ಗೈರಾದರೆ ಶಿಸ್ತುಕ್ರಮ :
ಪರಿಶಿಷ್ಠ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಪೆಂಡಿಂಗ್ ಕೆಲಸಗಳು ಬಾಕಿ ಇದ್ದಲ್ಲಿ ಇತ್ಯರ್ಥಗೊಳಿಸಿ ವಿದ್ಯಾರ್ಥಿವೇತನ ನೀಡಿ ಸುಗಮ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿ ಕೊಡಬೇಕು. ಪರಿಶಿಷ್ಠರ ಸಭೆಗಳಿಗೆ ಗೈರಾಗುವ ಅಧಿಕಾರಿಗಳಿಗೆ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.