J.C Madhuswamy ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯಲ್ಲ: ಯಡಿಯೂರಪ್ಪ
ಜೆಸಿಎಂ ಜತೆ ಮಾಜಿ ಸಿಎಂ ಬಿಎಸ್ವೈ ರಾಜಿಸಂಧಾನ
Team Udayavani, Mar 22, 2024, 8:20 PM IST
ತುರುವೇಕೆರೆ: ಜೆ.ಸಿ.ಮಾಧುಸ್ವಾಮಿ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಷ್ಟಪಡಿಸಿದರು.
ತಮ್ಮ ಹಾಗೂ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ಜೆ.ಸಿ.ಮಾಧುಸ್ವಾಮಿ ಜತೆ ಮಾಜಿ ಶಾಸಕ ಮಸಾಲೆ ಜಯರಾಂ ಅವರ ತೋಟದ ಮನೆಯಲ್ಲಿ ಶುಕ್ರವಾರ ಯಡಿಯೂರಪ್ಪ ಹಾಗೂ ಇತರ ಮುಖಂಡರು ಸಂಧಾನ ಸಭೆ ನಡೆಸಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ಪಕ್ಷದ ಟಿಕೆಟ್ ನಾನು ಕೊಡಿಸಿಲ್ಲ. ಹೈಕಮಾಂಡ್ನಿಂದ ಟಿಕೆಟ್ ಪಡೆದಿದ್ದು, ಅದರಲ್ಲಿ ನನ್ನ ಪಾತ್ರ ಇಲ್ಲ. ಈ ನಿಟ್ಟಿನಲ್ಲಿ ಮಾಧುಸ್ವಾಮಿಯವರನ್ನು ಪಕ್ಷ ಬಿಡದಂತೆ ಮನವೊಲಿಸಿರುವುದಾಗಿ ತಿಳಿಸಿದರು.
ಪಕ್ಷದ ಅಭ್ಯರ್ಥಿ ಸೋಮಣ್ಣ ಪರ ಪ್ರಚಾರ ಮಾಡುವುದು ಅವರಿಗೆ ಬಿಟ್ಟ ವಿಷಯ ಎಂದು ಯಡಿಯೂರಪ್ಪ ಈ ವೇಳೆ ಹೇಳಿದರು.
ಬೇಸರ ಸಹಜ, ಮುಂದಿನ ದಿನಗಳಲ್ಲಿ ತೀರ್ಮಾನ ಪ್ರಕಟ: ಮಾಧುಸ್ವಾಮಿ
ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷ ಹಾಗೂ ಅಭ್ಯರ್ಥಿ ಬಗ್ಗೆ ಬೇಸರ ಇರುವುದು ಸಹಜ. ಮುಂದಿನ ದಿನಗಳಲ್ಲಿ ನನ್ನ ತೀರ್ಮಾನ ಪ್ರಕಟಿಸಲಿದ್ದು, ಇದನ್ನೇ ಯಡಿಯೂರಪ್ಪ ಅವರಿಗೆ ತಿಳಿಸಿರುವುದಾಗಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ತಮ್ಮ ಹಾಗೂ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ಮಾಧುಸ್ವಾಮಿ ಜತೆ ಮಾಜಿ ಶಾಸಕ ಮಸಾಲೆ ಜಯರಾಂ ಅವರ ತೋಟದ ಮನೆಯಲ್ಲಿ ಶುಕ್ರವಾರ ಯಡಿಯೂರಪ್ಪ ಹಾಗೂ ಇತರ ಮುಖಂಡರು ಸಂಧಾನಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಮಾಧುಸ್ವಾಮಿ, ವಿ.ಸೋಮಣ್ಣ ನನ್ನನ್ನೇನೂ ಬಿಜೆಪಿಗೆ ಸೇರಿಸಿಲ್ಲ. ಈ ಹಿಂದೆ ನಾನೇ ಕೆಜೆಪಿಯಲ್ಲಿದ್ದು, ನಂತರ ಯಡಿಯೂರಪ್ಪನವರ ಜತೆ ಬಿಜೆಪಿಗೆ ಸೇರಿದ್ದೆ. ಇದರಲ್ಲಿ ಸೋಮಣ್ಣನವರ ಪಾತ್ರವಿಲ್ಲ ಎಂದರು.
ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರನ್ನು ಬೆಂಬಲಿಸುವ ವಿಚಾರದಲ್ಲಿ ಗುಟ್ಟು ಬಿಟ್ಟುಕೊಡದ ಮಾಧುಸ್ವಾಮಿ, ಕಾದುನೋಡುವ ತಂತ್ರಕ್ಕೆ ಮೋರೆ ಹೋದರು. ಸಂಧಾನದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಮಸಾಲೆ ಜಯರಾಮ್, ಯಾವುದೇ ಕಾರಣಕ್ಕೂ ಮಾಧುಸ್ವಾಮಿ ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಅವರು ನನ್ನ ರಾಜಕೀಯ ಗುರು ಎಂದರು.