ಮಾವನ ಆಸ್ತಿ ಕಬಳಿಸಲು ಸಂಚು ಮಾಡಿದ್ದ ರಾಜಶೇಖರ್ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ಯಾಕೆ?
Team Udayavani, Oct 20, 2020, 4:55 PM IST
ತುಮಕೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಆರೋಪಿಗಳಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಜಾಮೀನು ನೀಡಬೇಕು, ಇಲ್ಲದಿದ್ದರೆ ಕೋರ್ಟ್ ಅನ್ನೇ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ತಿಪಟೂರಿನ ರಾಜಶೇಖರ್ ಮತ್ತು ಹಾಗಲವಾಡಿಯ ವೇದಾಂತ್ ರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಮಾವನ ಆಸ್ತಿ ಕಬಳಿಸಲು ರಾಜಶೇಖರ್ ನಡೆಸಿದ ಸಂಚು ಎಂದು ಬಯಲಾಗಿದೆ. ಆದರೆ ಮಾವನ ಆಸ್ತಿಗೂ, ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೂ ಏನು ಸಂಬಂಧ ಎನ್ನುವುದೇ ಪೊಲೀಸರ ತಲೆನೋವಿಗೆ ಕಾರಣವಾಗಿದೆ.
ಯಾರು ಈ ರಾಜಶೇಖರ್? ಏನವನ ಹಿನ್ನಲೆ?
ತಿಪಟೂರು ಮೂಲದವನಾದ ರಾಜಶೇಖರ್ ಗುಬ್ಬಿ ತಾಲೂಕಿನ ಹಾಗಲವಾಡಿಯ ಕುರಿಹಳ್ಳಿಯಲ್ಲಿ ಕಲ್ಪನಾ ಜೊತೆ ಮದುವೆ ಆಗಿದ್ದ. ರಾಜಶೇಖರ್ ಮಾವನ ಮನೆಯ ಆಸ್ತಿಗೋಸ್ಕರ ಕಲ್ಪನಾ ಮತ್ತು ಆಕೆಯ ತಂಗಿ ಭೂಮಿಕಾ ಇಬ್ಬರನ್ನೂ ಮದುವೆ ಆಗಬೇಕು ಎಂದು ಪ್ಲಾನ್ ಮಾಡಿದ್ದ. ಆದರೆ ಅದು ಫಲಿಸಲಿಲ್ಲ. ಕಲ್ಪನಾ ತಂಗಿ ಭೂಮಿಕಾ ಜೊತೆ ಅರಬೇಸಂದ್ರ ರಮೇಶ್ ಅವರ ಮದುವೆಯಾಗಿತ್ತು. ರಮೇಶನ ವಿರುದ್ದ ಪಿತೂರಿ ಮಾಡಲು ರಾಜಶೇಖರ ಹಾಗಲವಾಡಿ ಮೂಲದ ವೇದಾಂತನ ಸಹಾಯ ಪಡೆದು ಸಂಚು ರೂಪಿಸಿದ್ದ.
ಇದನ್ನೂ ಓದಿ:ನಟಿಯರಿಗೆ ಜಾಮೀನು ಕೊಡದಿದ್ದರೆ ಸ್ಫೋಟ, ಕೊಲೆ!; ನ್ಯಾಯಾಧೀಶರಿಗೇ ಡಿಟೋನೇಟರ್ ಇರಿಸಿ ಪತ್ರ
ಹೀಗಾಗಿ ವೇದಾಂತ್ ಜೊತೆ ಸೇರಿದ್ದ ರಾಜಶೇಖರ್, ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಆರೋಪಿಗಳಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಜಾಮೀನು ನೀಡಬೇಕು, ಇಲ್ಲದಿದ್ದರೆ ಕೋರ್ಟ್ ಅನ್ನೇ ಸ್ಫೋಟಿಸುವುದಾಗಿ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣದ ಎಲ್ಲ ಆರೋಪಿಗಳಿಗೂ ಜಾಮೀನು ನೀಡಬೇಕು ಎಂದು ಪತ್ರ ಬರೆದಿದ್ದು, ಎನ್ಡಿಪಿಎಸ್ ನ್ಯಾಯಾಲಯವನ್ನು ಸ್ಫೋಟಿಸುತ್ತೇನೆ ಎಂದು ಬೆದರಿಕೆ ಹಾಕಿ ನ್ಯಾಯಾಧೀಶ ಸೀನಪ್ಪ ಅವರಿಗೆ ಸ್ಫೋಟಕ ವಸ್ತು ಇರುವ ಪಾರ್ಸೆಲ್ ಕಳುಹಿಸಿದ್ದರು.
ಪತ್ರದ ಜೊತೆ ರಾಜಶೇಖರ್ ಪತ್ನಿಯ ತಂಗಿ ಗಂಡ ರಮೇಶ್ ನ ಆಧಾರ್ ಕಾರ್ಡ್ ಹಾಕಿದ್ದರು. ಇದರಿಂದ ಪ್ರಕರಣವನ್ನು ಬೇಧಿಸಲು ಪೊಲೀಸರಿಗೆ ಪರೋಕ್ಷವಾಗಿ ಇವರೇ ಸಹಾಯ ಮಾಡಿದ್ದಾರೆ. ಸದ್ಯ ರಾಜಶೇಖರ್ ಮತ್ತ ವೇದಾಂತ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ನ್ಯಾಯಾಧೀಶರಿಗೆ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್: ತುಮಕೂರಿನಲ್ಲಿ ಇಬ್ಬರ ಬಂಧನ
ಹಿಂದೆಯೂ ಸಿಕ್ಕಿಬಿದ್ದಿದ್ದ
ರಾಜಶೇಖರ್ ಅತ್ತೆಯ ಆಸ್ತಿಗಾಗಿ ಹತ್ತು ವರ್ಷಗಳಿಂದ ಅತ್ತೆ, ಹೆಂಡತಿ, ಮಾವ, ನಾದಿನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದ. ನಾಲ್ಕು ಎಕರೆ ಜಮೀನಿಗಾಗಿ ಮಾಡಿದ ಷಢ್ಯಂತ್ರ ಮಾಡಿದ್ದ ಎನ್ನಲಾಗದೆ. 2019ರಲ್ಲಿ ನಕಲಿ ಛಾಪ ಕಾಗದ ಸೃಷ್ಠಿ ಮಾಡಿ ರಮೇಶ ಹಾಗೂ ಮಾವನ ಮೇಲೆ ಆರೋಪ ಹೊರಿಸಿದ್ದ.
ಮಾವ ಬಸವಲಿಂಗಯ್ಯ ತನ್ನ ಮಗಳನ್ನೇ ಮಾರಾಟ ಮಾಡಿದ್ದಾರೆಂದು 2019ರಲ್ಲಿ ರಾಜೇಖರ್ ಆರೋಪ ಮಾಡಿದ್ದ. ಒಂದೂವರೆ ಲಕ್ಷಕ್ಕೆ ಮಗಳನ್ನು ಮಾರಾಟ ಮಾಡಿದ್ದಾರೆ ಎಂದು ನಕಲಿ ಚಾಪಕಾಗದ ಸೃಷ್ಟಿಸಿ ಮಾವ ಬಸವಲಿಂಗಯ್ಯ ಹಾಗೂ ರಮೇಶನ ಮೇಲೆ ಆರೋಪ ಹೊರಿಸಲು ನಾಟಕವಾಡಿದ್ದ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿದ್ದ.
ಪ್ರಕರಣ ತನಿಖೆ ನಡೆಸಿದ್ದ ಚೇಳೂರು ಪೊಲೀಸರು ರಾಜಶೇಖರನಿಗೆ ಎಚ್ಚರಿಕೆ ನೀಡಿದ್ದರು. ಆದರೆ ಪೊಲೀಸರ ಎಚ್ಚರಿಕೆಯನ್ನ ಲಘುವಾಗಿ ಪರಿಗಣಿಸಿದ ರಾಜಶೇಖರ್ ಇದೀಗ ಇದೀಗ ಮತ್ತೊಮ್ಮೆ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದು ಆತಂಕ ಸೃಷ್ಟಿಸಿ ಸಿಕ್ಕಿಬಿದ್ದಿದ್ದಾನೆ.