ಶಿರಾ ಉಪಚುನಾವಣೆ: ಚೆಕ್ಪೋಸ್ಟ್ಗಳಿಗೆ ಸಿಇಒ ಭೇಟಿ
Team Udayavani, Oct 30, 2020, 5:01 PM IST
ತುಮಕೂರು: ಶಿರಾ ತಾಲೂಕು ವಿಧಾನ ಸಭಾ ಉಪ ಚುನಾವಣಾ ಸಂಬಂಧ ಕಳ್ಳಂಬೆಳ್ಳ – ಸೀಬಿ ಅಗ್ರಹಾರ ಮತ್ತು ಉಜ್ಜನಕುಂಟೆಯಲ್ಲಿ ಸ್ಥಾಪಿಸಲಾಗಿರುವ ಚೆಕ್ಪೋಸ್ಟ್ಗಳಿಗೆ ಗುರುವಾರ ಜಿಪಂ ಸಿಇಒ ಶುಭಾ ಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಚೆಕ್ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ ಸಿಬ್ಬಂದಿ ಕಾರ್ಯನಿರ್ವಹಣೆ ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ಚರ್ಚಿಸಿದರು. ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಚಟುವಟಿಕೆಗಳ ವಿರುದ್ಧ ಕ್ರಮವಹಿಸಿರುವ ಬಗ್ಗೆ ಪರಿಶೀಲಿಸಿದರು. ಚೆಕ್ ಪೋಸ್ಟ್ಗಳಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಲು ಸೂಚಿಸಿದರು.
ಎಲ್ಲಾ ಸಿಬ್ಬಂದಿ ಅಧಿಕಾರಿಗಳು ಕೋವಿಡ್-19ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಿದರು. ಚೆಕ್ಪೋಸ್ಟ್ಗಳಲ್ಲಿ ಅಳವಡಿಸಿರುವ ಸಿ.ಸಿ. ಟಿವಿಗಳ ಸುಸ್ಥಿತಿಯ ಬಗ್ಗೆ ಪ್ರತಿದಿನ ಪರಿಶೀಲನಾ ಕಾರ್ಯ ಕೈಗೊಳ್ಳಬೇಕು ಹಾಗೂ ಲಾಗ್ ಪುಸ್ತಕವನ್ನು ಪರಿಶೀಲಿಸಿದರು.
ಗ್ರಾಮೀಣಾಭಿವೃದ್ಧಿ ಪೋಲೀಸ್ ಹಾಗೂ ಚೆಕ್ ಪೋಸ್ಟ್ಗಳಿಗೆ ನಿಯೋಜಿಸಲಾಗಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ, ಸಿಬ್ಬಂದಿಗಳು ಹಾಜರಿದ್ದರು.
ಚುನಾವಣೆ: ಕಾರ್ಮಿಕರಿಗೆ ರಜೆ ಘೋಷಣೆ : ಶಿರಾ ವಿಧಾನಸಭಾ ಉಪ ಚುನಾವಣೆಯ ಮತದಾನದ ಸಂಬಂಧ ಜಿಲ್ಲೆಯ ಶಿರಾ ತಾಲೂಕಿನ ಮತದಾನ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೋಂದಾಯಿತರಾದ ಎಲ್ಲಾ ಅರ್ಹ ಮತದಾರ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ನ. 3ರಂದು ವೇತನ ಸಹಿತ ರಜೆ ನೀಡಿ, ಎಲ್ಲಾ ಕಾರ್ಮಿಕರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಬೇಕಾಗಿ ಎಲ್ಲಾ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿ ಸುಭಾಷ್ ಹೇಳಿದರು.
ಸಂಬಂಧಪಟ್ಟ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳು 1963 ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ ಕಾಯ್ದೆಯ ಕಲಂ 3-ಎ ಪ್ರಕಾರ ಮತ ಚಲಾಯಿಸಲು ಅವಕಾಶ ಮಾಡಿಕೊಡಬೇಕಾಗುತ್ತದೆ. ಯಾವುದೇ ಸಂಸ್ಥೆಗಳ ಮಾಲೀಕರು ಕಾರ್ಮಿಕರಿಗೆ ಮತದಾನ ಚಲಾಯಿಸಲು ಅವಕಾಶ ನೀಡದೆ ಇದ್ದಲ್ಲಿ 1963ರ ಕರ್ನಾಟಕ ಔದ್ಯೋಗಿಕಸಂಸ್ಥೆಗಳ ಕಾಯ್ದೆ ಕಲಂ-3ಎ ರನ್ವಯ ಕಾನೂನು ರಿತ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಮದ್ಯ ಮಾರಾಟ ನಿಷೇಧ : ಶಿರಾ ವಿಧಾನಸಭಾ ಉಪ ಚುನಾವಣಾ ಮತದಾನವು ಮುಕ್ತ ಹಾಗೂ ನಿಸ್ಪಕ್ಷಪಾತವಾಗಿ ನಡೆಯಲು ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ನ. 1ರ ಸಂಜೆ 6 ಗಂಟೆಯಿಂದ ನ. 3ರ ಮಧ್ಯರಾತ್ರಿ 12 ಗಂಟೆಯವರೆಗೆ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲಾ ಮದ್ಯದಂಗಡಿಗಳನ್ನು (ಶಿರಾ ಕೆಎಸ್ ಬಿಸಿಎಲ್ ಡಿಪೋ ಒಳಗೊಂಡಂತೆ) ಮುಚ್ಚಿಸಿ ಮದ್ಯ ಮಾರಾಟ, ಸಾಗಾಣಿಕೆ, ಹಂಚಿಕೆ, ಶೇಖರಣೆ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಆದೇಶಿಸಿದ್ದಾರೆ.