ಸಿದ್ಧಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ
Team Udayavani, Apr 13, 2019, 12:02 PM IST
ಕುಣಿಗಲ್: ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯ ಕ್ಷೇತ್ರ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತ ಗಣದ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೇರವೇರಿತು.
ರಥೋತ್ಸವ ಚಾಲನೆಗೂ ಮುನ್ನ ಮೊದಲ ಪೂಜೆಯ ಷಟಸ್ಥಲ ಧ್ವಜ ಹರಾಜು ನಡೆಯಿತು. ಬೆಳಗಾವಿ ಹಿರೇಮಠ ಅಮರನಾಥ ಗುರುಕುಲದ ಚಂದ್ರಶೇಖರ್ ಶಾಸ್ತ್ರಿಗಳು 2.46 ಲಕ್ಷ ರೂ.ಗೆ ಕೂಗಿಕೊಂಡರು. ನಂತರ ಮಧ್ಯಾಹ್ನ ಅಭಿಜಿತ್ ಮೂಹೂರ್ತ 12.30ಕ್ಕೆ ಸರಿಯಾಗಿ ರಥದ ಗಾಲಿಗೆ ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ತೆಂಗಿನ ಕಾಯಿ ಒಡೆಯುವ ಮೂಲಕ
ರಥೋತ್ಸವಕ್ಕೆ ಚಾಲನೆ ನೀಡಿದರು.
ಮೈಸೂರು ರಾಜ ವಂಶಸ್ಥರಾದ ಯದುವೀರ್ ಓಡೆಯರ್, ಪತ್ನಿ ತ್ರೀಷಿಕಾ ಯದುವೀರ್, ಬಾಳೆಹೊನ್ನೂರು ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಕುಪೂ³ರು ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆ ವಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿದನಗೆರೆ ಸತ್ಯ
ಶನೇಶ್ವರ ಕ್ಷೇತ್ರದ ಧನಂಜಯ್ಯ ಗುರೂಜಿ, ವಿಆರ್ಎಲ್ ಸಮೂಹ ಸಂಸ್ಥೆಯ ಮಾಲೀಕ ರಾದ ವಿಜಯಸಂಕೇಶ್ವರ್, ಎಸಿ ಶಿವಕುಮಾರ್, ದೇವಸ್ಥಾನದ ಇಒ ಧನಲಕ್ಷ್ಮೀ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಶ್ರೀದೇವಿ ಶೆಟ್ಟರ್ ಹಾಜರಿದ್ದರು.
ಭಕ್ತಿ ಸಮರ್ಪಿಸಿದ ಭಕ್ತರು: ಸುಡುವ ಬಿಸಿಲನ್ನು ಲೆಕ್ಕಿಸದೇ ರಾಜ್ಯದ ವಿವಿಧ ಮೂಲಗಳಿಂದ ರಥೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಭಕ್ತ ಗಣದ ಹರ್ಷೋ ದ್ಘಾರದ ನಡುವೆ ರಥಕ್ಕೆ ಹೂ ದವನ ಬಾಳೆಹಣ್ಣು ಹಾಗೂ ಕರಿ ಮೆಣಸುನ್ನು ತೂರಿ ತಮ್ಮ ಭಕ್ತಿ ಹಾಗೂ ಹರಕೆ ಸಮರ್ಪಿಸಿದರು.
ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆ: ಇನ್ನೂ ರಥೋತ್ಸವಕ್ಕೆ ಬರುವ ಭಕ್ತರ ದಣಿ ವಾರಿಸಲು ದಾರಿಯುದಕ್ಕೂ ಭಕ್ತರೇ ನೀರುಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಣೆ ಮಾಡುತ್ತಿದ್ದ ದೃಶ್ಯ ಎಲ್ಲಾ ಕಡೆ ಕಂಡು ಬಂತು. ಇದರ ಜೊತೆಗೆ ದೇವಸ್ಥಾನದ ಸುತ್ತಮುತ್ತ ಅರವಟಿಕೆ ನಡೆಸಿದ ಭಕ್ತರು ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು. ರಥ ಬೀದಿಯಲ್ಲಿ ಬಿಸಿಲಿನತಾಪಕ್ಕೆ ಭಕ್ತರ ಕಾಲು ಸುಡದಂತೆ ದೇವಸ್ಥಾನದ ಅಡಳಿತ ಮಂಡಳಿಯಿಂದ ನೀರಿನ ಟ್ಯಾಂಕ್ ಮೂಲಕ ರಥ ಬೀದಿಗೆ ನೀರು ಸಿಂಪಡಿಸಲಾಯಿತು.
ದಾಸೋಹ ಮನೆಯಲ್ಲಿಯೂ ಪ್ರಸಾದ: ರಥೋತ್ಸವಕ್ಕೆ ಬರುವ ಸಾವಿರಾರು ಭಕ್ತರಿಗೆ ದಾಸೋಹ ಮಹಾಮನೆಯಲ್ಲಿ ದಾಸೋಹ ಸಮಿತಿ ಅಧ್ಯಕ್ಷ ವಿಶ್ವನಾಥ್ ಬುಳ್ಳಾ ಅವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಪ್ರಸಾದ ವಿತರಣೆ
ಮಾಡಲಾಯಿತು. ಸುಮಾರು 50 ಸಾವಿರ ಮಂದಿ ಭಕ್ತರು ಪ್ರಸಾದ ಸ್ವೀಕರಿಸಿದರು. ಉತ್ತರ ಉತ್ತರ ಕರ್ನಾಟಕದ ಗೋಧಿ ಪಾಯಸ, ಪಲ್ಯ, ಅನ್ನ ಸಾರು, ಮಜ್ಜಿಗೆ ಹಾಗೂ ರೈಸ್ಬಾತ್ ಉಣಬಡಿಸಲಾಯಿತು.