ಶ್ರೀಗಳಿಗೆ ಸಿಗದ ಭಾರತ ರತ್ನ: ಭಕ್ತರ ಆಕ್ರೋಶ
Team Udayavani, Jan 28, 2019, 7:20 AM IST
ಭಕ್ತರ ಪಾಲಿನ ನಡೆದಾಡುವ ದೇವರಿಗೆ ರಾಜ್ಯದ ಜನರು ನಿರೀಕ್ಷಿಸಿದ್ದ ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡುವಲ್ಲಿ ಇನ್ನೂ ಮೀನಮೇಷ ಎಣಿಸುತ್ತಿದೆ. ಲಕ್ಷಾಂತರ ಭಕ್ತರು ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡಬೇಕು ಎಂದು ಕಳೆದ ಮೂರು ನಾಲ್ಕು ವರ್ಷಗಳಿಂದ ಮಾಡುತ್ತಿರುವ ಒತ್ತಾಯಕ್ಕೆ ಕೇಂದ್ರ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡದೇ ಇರುವುದಕ್ಕೆ ಕಲ್ಪತರು ನಾಡಿನಾದ್ಯಂತ ಭಕ್ತರ ಆಕ್ರೋಶ ಹೆಚ್ಚುತ್ತಲೇ ಇದೆ. ಶ್ರೀಗಳಿಗಿಂತ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆ ಮಾಡಿರುವವರು ಯಾರಿದ್ದಾರೆ? ಏಕೆ ಶ್ರೀಗಳಿಗೆ ಭಾರತ ರತ್ನ ನೀಡುತ್ತಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.
ತುಮಕೂರು: ಕೇಂದ್ರ ಸರ್ಕಾರ ಈ ಬಾರಿಯೂ ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡದೇ ಇರುವುದಕ್ಕೆ ಕಲ್ಪತರ ನಾಡಿನಲ್ಲಿ ಜನಾಕ್ರೋಶಗೊಳ್ಳುತ್ತಿದ್ದಾರೆ. ತ್ರಿವಿಧ ದಾಸೋಹಿಗಳಾಗಿ, ಕಾಯಕವೇ ಕೈಲಾಸ ಎಂದು ಸಮಾಜದ ಮಕ್ಕಳಿಗೆ ಸಮಾನತೆಯಿಂದ ಜ್ಞಾನ ದಾಸೋಹ ನೀಡಿರುವ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಗೆ ವರ್ಷಗಳಿಂದ ಕೇಳುತ್ತಿದ್ದರೂ ಕೊಡಲಿಲ್ಲ. ಈಗ ಶ್ರೀಗಳು ಶಿವೈಕ್ಯರಾಗಿದ್ದಾರೆ. ಈಗಲಾದರೂ ನಮ್ಮ ಆಸೆಯನ್ನು ಕೇಂದ್ರ ಸರ್ಕಾರ ಈಡೇರಿಸುತ್ತೆ ಎಂದು ನಿರೀಕ್ಷಿಸಿದ್ದೆವು. ಆದರೆ, ಈ ಬಾರಿಯೂ ಭಕ್ತರ ನಿರೀಕ್ಷೆಯನ್ನು ಕೇಂದ್ರ ಹುಸಿಗೊಳಿಸಿ ಲಕ್ಷಾಂತರ ಭಕ್ತರ ಪಾಲಿಗೆ ನೋವುಂಟು ಮಾಡಿದೆ.
ಭಕ್ತರ ಅಸಮಾಧಾನ: 111 ವರ್ಷಗಳ ಕಾಲ ಬದುಕಿ ಸಾರ್ಥಕ ಸೇವೆ ಸಲ್ಲಿಸಿರುವ ಶ್ರೀಗಳಿಗೆ ಈ ಬಾರಿ ಭಾರತ ರತ್ನ ನೀಡಬೇಕು ಎಂದು ನಾಡಿನ ವಿವಿಧ ಕಡೆಗಳಲ್ಲಿ ಒತ್ತಾಯ ಪೂರ್ವಕ ಪ್ರತಿಭಟನೆಯನ್ನು ಭಕ್ತರು ಮಾಡಿದ್ದಾರೆ. ರಾಜ್ಯದ ಎಲ್ಲಾ ಪಕ್ಷಗಳ ಮುಖಂಡರು ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನು ಹಾಕಿದ್ದಾರೆ. ಆದರೂ ಕೇಂದ್ರ ಸರ್ಕಾರ ಶ್ರೀಗಳಿಗೆ ಭಾರತ ರತ್ನ ನೀಡದೇ ಇರುವುದಕ್ಕೆ ಭಕ್ತರಲ್ಲಿ ನೋವು ಉಂಟಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಗೃಹ ಸಚಿವ ಎಂ.ಬಿ. ಪಾಟೀಲ್ ಅಸಮಾಧಾನ
ತುಮಕೂರು: ಬಡ ಮಕ್ಕಳಿಗೆ ಅನ್ನ ಜ್ಞಾನ ದಾಸೋಹ ನೀಡುತ್ತಿದ್ದ ಶ್ರೀಗಳು ಈ ಶತಮಾನದ ಮಹಾನ್ ಪುರುಷ. ಇಂಥ ಮಹಾನ್ ಪುರುಷ ಮತ್ತೂಬ್ಬ ಹುಟ್ಟಲ್ಲ. ಇಂಥ ಶ್ರೀಗಳಿಗೆ ಭಾರತ ರತ್ನ ಕೊಟ್ಟಿದ್ದರೆ ಆ ಪ್ರಶಸ್ತಿಗೆ ಹೆಚ್ಚು ಗೌರವ ಬರುತ್ತಿತ್ತು. ಶ್ರೀಗಳಿಗೆ ಭಾರತ ರತ್ನ ದೊರಕದೇ ಇರುವುದು ನೋವಾಗಿದೆ ಎಂದು ಗೃಹಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ನಗರದ ಸಿದ್ಧಗಂಗಾ ಮಠಕ್ಕೆ ಭಾನುವಾರ ಭೇಟಿ ನೀಡಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಮದರ್ ತೆರೇಸಾ ಹೇಗೆ ನೊಬೆಲ್ ಪ್ರಶಸ್ತಿ ಪಡೆದರೋ ಹಾಗೆ ಶ್ರೀಗಳು ನೊಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದರು. ಶ್ರೀಗಳಿಗೆ ಭಾರತರತ್ನ ಕೊಟ್ಟಿದ್ದರೆ ಆ ಪ್ರಶಸ್ತಿಗೆ ಗೌರವ ಹೆಚ್ವಾಗುತ್ತಿತ್ತು. ಕಾರಣಾಂತರದಿಂದ ನೀಡಲಾಗಿಲ್ಲ. ಇದು ಭಕ್ತರಲ್ಲಿ ಸಾಕಷ್ಟು ನೋವುಂಟು ಮಾಡಿದೆ. ಅದೇ ರೀತಿ ನನಗೂ ನೋವಾಗಿದೆ ಎಂದು ಹೇಳಿದರು.
ಒತ್ತಾಯ: ಶ್ರೀಗಳ ಸೇವೆ ಅಮೂಲ್ಯವಾದದ್ದು, ಮುಂದೆ ಯಾವುದೇ ಸರ್ಕಾರವಿರಲಿ ಶ್ರೀಗಳಿಗೆ ಭಾರತ ರತ್ನ ನೀಡಿ ಗೌರವ ನೀಡಬೇಕು ಎಂದು ಒತ್ತಾಯಿಸಿದರು. ಶ್ರೀಗಳ ಅಂತಿಮ ಕಾರ್ಯ ನಡೆದ ಬಳಿಕ ಮಠಕ್ಕೆ ಬಂದಿರಲಿಲ್ಲ. ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ್ದೇನೆ. ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳೊಂದಿಗೆ ಮಾತನಾಡಿ ತೆರಳುತ್ತೇನೆ. ವಿಜಯಪುರದಲ್ಲಿ ನಡೆದ ವಚನ ಸಾಹಿತ್ಯದ ಪಿತಾಮಹ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯನ್ನು ಪ್ರಥಮ ಬಾರಿಗೆ ಭೇಟಿಯಾಗಿದ್ದೆವು.
ನಾನು ಯಾವಾಗಲು ಮಠಕ್ಕೆ ಭೇಟಿ ಕೊಟ್ಟಾಗಲೆಲ್ಲ ಶ್ರೀಗಳು ಹಳಕಟ್ಟಿ ಸಂಶೋಧನಾ ಕೇಂದ್ರ ಹೇಗೆ ನಡೆಯುತ್ತಿದೆ ಎಂದು ಕೇಳುತ್ತಿದ್ದರು. ಬಸವ ಸಾಹಿತ್ಯವನ್ನು ಸಮಾಜಕ್ಕೆ ಪರಿಚಯಿಸಿದವರು ಹಳಕಟ್ಟಿ ಎಂದರು. ಶ್ರೀಗಳ ಬಗ್ಗೆ ಅಧ್ಯಯನ ಕೇಂದ್ರ, ಅವರ ಕಾರ್ಯದ ಬಗ್ಗೆ ಮ್ಯೂಸಿಯಂ, ಅವರು ನಡೆದು ಬಂದ ದಾರಿ, ಸಾಹಿತ್ಯದ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸಲು ವಸ್ತು ಸಂಗ್ರಹಾಲಯ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಿವರಿಸಿದರು.
ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎನ್ನುವುದು ನಮ್ಮೆಲ್ಲರ ಒತ್ತಾಸೆಯಾಗಿತ್ತು. ಈ ಹಿಂದೆ 2 ಬಾರಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಒಮ್ಮೆ ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನಂತರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ಈಗಲೂ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಪ್ರಶಸ್ತಿ ಬರುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ, ಪ್ರಶಸ್ತಿಯ ನಿರೀಕ್ಷೆ ಹುಸಿಯಾಗಿದೆ.
-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಶ್ರೀಗಳಿಗೆ ಭಾರತ ರತ್ನ ಕೊಡಬೇಕಾಗಿತ್ತು. ಸಾಮಾಜಿಕ, ಧಾರ್ಮಿಕವಾಗಿ ಸೇವೆ ಸಲ್ಲಿಸಿದ್ದಾರೆ. ಇಂದಲ್ಲ ನಾಳೆ ಭಾರತ ರತ್ನ ಬಂದೇ ಬರುತ್ತದೆ. ಅವರ ಸೇವೆ ಆ ರೀತಿಯದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ರೀಗಳ ಮೇಲೆ ಬಹಳ ಅಭಿಮಾನವಿದೆ. ಯಾವ ಕಾರಣಕ್ಕೆ ಭಾರತ ರತ್ನ ತಪ್ಪಿದೆ ಗೊತ್ತಿಲ್ಲ. ಆದರೆ, ಇಂದಲ್ಲ ನಾಳೆ ಶ್ರೀಗಳಿಗೆ ಭಾರತ ರತ್ನ ದೊರಕೇ ದೊರಕುತ್ತದೆ.
-ಜಿ.ಎಸ್.ಬಸವರಾಜ್, ಮಾಜಿ ಸಂಸದ
ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಈ ಬಾರಿ ನೀಡಬೇಕಾಗಿತ್ತು. ಇದರಿಂದ ನಮಗೆ ತುಂಬಾ ಬೇಸರವಾಗಿದೆ. ಬೇರೆಯವರಿಗೆ ಭಾರತ ರತ್ನ ನೀಡುವುದರ ಬಗ್ಗೆ ನಮ್ಮ ಅಸಮಾಧಾನವಿಲ್ಲ. ಆದರೆ, ಶ್ರೀಗಳ ಸೇವೆ ಪರಿಗಣಿಸಿ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು. ರಾಜ್ಯ ಸರ್ಕಾರ ಈ ಬಗ್ಗೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಅಸಂಖ್ಯಾತ ಭಕ್ತರ ನಡೆದಾಡುವ ದೇವರಾಗಿದ್ದ ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಮತ್ತೂಮ್ಮೆ ಮನವಿ ಮಾಡುತ್ತೇವೆ.
-ಡಾ.ಎಸ್.ರಫೀಕ್ ಅಹಮದ್, ಮಾಜಿ ಶಾಸಕ
* ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ