ಇನ್ನೂ ಈಡೇರದ ಆಜ್ರಿ – ಬಡಬಾಳು ಸೇತುವೆ ಬೇಡಿಕೆ
Team Udayavani, Mar 8, 2019, 1:00 AM IST
ಆಜ್ರಿ: ದಶಕದಿಂದಲೂ ಹೆಚ್ಚಿನ ಕಾಲದಿಂದ ಆಜ್ರಿಯಿಂದ ಸಂಪರ್ಕ ಕಲ್ಪಿಸುವ ಬಡಬಾಳುವಿನಲ್ಲಿ ಸೇತುವೆ ಬೇಡಿಕೆಯಿದ್ದರೂ ಇನ್ನೂ ಈಡೇರಿಲ್ಲ. ಪ್ರತಿ ಬಾರಿ ಚುನಾವಣೆ ಬಂದಾಗೊಮ್ಮೆ ಜನಪ್ರತಿನಿಧಿಗಳಿಂದ ಈಡೇರಿಸುವ ಭರವಸೆ ಸಿಗುತ್ತದೆ.
ಆಜ್ರಿಯಿಂದ ಜಡ್ಡಿನಮೂಲೆ, ಯಡೂರು, ಯಡ್ನಾಡಿಯಾಗಿ ಬಡಬಾಳುವಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಬಡಬಾಳುವಿನಲ್ಲಿ ಕುಬಾj ನದಿಗೆ ದಶಕದಿಂದಲೂ ಸೇತುವೆ ಬೇಡಿಕೆಯಿದೆ.
5 ಕಿ.ಮೀ. ದೂರ
ಬಡಬಾಳುವಿನಲ್ಲಿ ಸೇತುವೆ ಇಲ್ಲದ ಕಾರಣ ಜಡ್ಡಿನಮೂಲೆ, ಯಡೂರು, ಕೇವರ್ಜಿ, ಕ್ಯಾಕೋಡು ಭಾಗದ ಜನರು ಆಜ್ರಿಗೆ ಬಂದು ಮುಖ್ಯ ಪೇಟೆಯಾದ ಶಂಕರನಾರಾಯಣಕ್ಕೆ ತೆರಳಬೇಕು. ಸುಮಾರು 5 ಕಿ.ಮೀ. ದೂರ ಹೆಚ್ಚುವರಿ ಕ್ರಮಿಸಬೇಕಾದ ಅನಿವಾರ್ಯ ಇಲ್ಲಿನ ಜನರದ್ದು.
ಮಳೆಗಾಲದಲ್ಲಿ ಸಂಚಾರ ಸ್ಥಗಿತ
ಆಜ್ರಿಯಿಂದ ಬಡಬಾಳು ಮಾರ್ಗ ಮಳೆಗಾಲದಲ್ಲಿ ಸೇತುವೆಯಿಲ್ಲದ ಕಾರಣ ಸಂಚಾರವೇ ಸ್ಥಗಿತ ಗೊಳಿಸಲಾಗುತ್ತದೆ. ಬೇಸಗೆಯಲ್ಲಿ ಕುಬಾj ನದಿಯಲ್ಲಿ ನೀರು ಕಡಿಮೆಯಾದ ಅನಂತರ ನದಿಯಲ್ಲೇ ತಾತ್ಕಾಲಿಕ ಮಾರ್ಗ ಮಾಡಿ ವಾಹನ ಸಂಚಾರ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಇನ್ನು ಮಳೆಗಾಲದಲ್ಲಿ ನದಿ ದಾಟಲು ಕಾಲು ಸಂಕವನ್ನು ನಿರ್ಮಿಸಲಾಗುತ್ತದೆ.
ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜಿಗೆ ಹೋಗುವ ಅನೇಕ ಮಂದಿ ಮಕ್ಕಳು ಕೂಡ ಬಡಬಾಳು ಭಾಗದಲ್ಲಿದ್ದು, ಅವರಿಗೆ ಸೇತುವೆಯಾದರೆ ಸಾಕಷ್ಟು ಅನುಕೂಲವಾಗಲಿದೆ. ಇಲ್ಲದಿದ್ದರೆ ಅವರು ಸುತ್ತುಬಳಸಿ, ಆಜ್ರಿಗೆ ಬಂದು ತೆರಳಬೇಕು.
ಹುಸಿಯಾದ ಭರವಸೆ
ಇಲ್ಲಿಗೆ ಸೇತುವೆ ಬೇಡಿಕೆ ಕುರಿತಂತೆ ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಕೊಟ್ಟಿದ್ದೇವೆ. ಚುನಾವಣೆ ಬಂದಾಗ ಸೇತುವೆ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತಾರೆ. ಆ ಬಳಿಕ ಮಾತ್ರ ಅದು ನನೆಗುದಿಗೆ ಬಿದ್ದಿರುತ್ತದೆ. ಪ್ರತಿ ಸಲವೂ ಇದೇ ಪುನರಾವರ್ತನೆಯಾಗುತ್ತಿದೆ ಎಂದು ಬಡಬಾಳು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇತುವೆ ಬೇಡಿಕೆ ಗಮನಕ್ಕೆ
ಆಜ್ರಿಯಿಂದ ಬಡಬಾಳುವಿಗೆ ಸಂಪರ್ಕಿಸುವ ಸೇತುವೆ ಬೇಡಿಕೆ ಕುರಿತು ಅಲ್ಲಿನ ಜನರು ನೀಡಿರುವ ಮನವಿ ಗಮನಕ್ಕೆ ಬಂದಿದೆ. ಹಂತ ಹಂತವಾಗಿ ಬೈಂದೂರು ಭಾಗದ ಹೆಚ್ಚಿನೆಲ್ಲ ಸೇತುವೆ ಬೇಡಿಕೆ ಇರುವ ಕಡೆ ಮಂಜೂರು ಮಾಡುತ್ತಿದ್ದು, ಈಗಾಗಲೇ ಮೋರ್ಟು- ಬೆಳ್ಳಾಲ ಸೇತುವೆ ಕಾಮಗಾರಿ ಕೊನೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಬಡಬಾಳು ಸೇತುವೆಗೂ ಅನುದಾನ ಮೀಸಲಿರಿಸಲಾಗುವುದು.
-ಬಿ.ಎಂ. ಸುಕುಮಾರ ಶೆಟ್ಟಿ,, ಬೈಂದೂರು ಶಾಸಕರು