ಕುಂಜೂರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ
ಒಂದೂವರೆ ವರ್ಷದ ಬಳಿಕ ಪುನರಾರಂಭಗೊಂಡ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ
Team Udayavani, Nov 8, 2021, 12:58 PM IST
ಕಾಪು: ಕೋವಿಡ್ 19 ಕಾರಣದಿಂದ ಒಂದೂವರೆ ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಅಂಗನವಾಡಿ ಕೇಂದ್ರಗಳಲ್ಲಿ ಮತ್ತೆ ಮಕ್ಕಳ ಕಲರವ ಪ್ರಾರಂಭಗೊಂಡಿದ್ದು ತಾಲೂಕಿನ ವಿವಿಧೆಡೆ ಸಂಭ್ರಮ ಸಡಗರದೊಂದಿಗೆ ಪುಟ್ಟ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಬರಮಾಡಿಕೊಳ್ಳಲಾಯಿತು.
ಕಾಪು ತಾಲೂಕಿನ ಎಲ್ಲೂರು ಗ್ರಾ. ಪಂ. ವ್ಯಾಪ್ತಿಯ ಕುಂಜೂರು ದುರ್ಗಾ ನಗರ ಅಂಗನವಾಡಿ ಕೇಂದ್ರವನ್ನು ಸ್ಥಳೀಯ ಕುಂಜೂರು ಸ್ಪೋರ್ಟ್ಸ್ ಕ್ಲಬ್ನ ಸಹಯೋಗದೊಂದಿಗೆ ಮದುವಣಗಿತ್ತಿಯಂತೆ ಶೃಂಗರಿಸಿ, ಮಕ್ಕಳಿಗೆ ಚಾಕಲೇಟ್, ಕಂಪಾಸ್ ಬಾಕ್ಸ್ಗಳನ್ನು ವಿತರಿಸಿ, ಗುಲಾಬಿ ಹೂ ನೀಡಿ, ಆರತಿ ಬೆಳಗಿ ಮಕ್ಕಳನ್ನು ಸ್ವಾಗತಿಸಲಾಯಿತು.
ಎಲ್ಲೂರು ಗ್ರಾ. ಪಂ. ಅಧ್ಯಕ್ಷ ಜಯಂತ್ ಕುಮಾರ್, ಸದಸ್ಯರಾದ ಯಶವಂತ್ ಶೆಟ್ಟಿ, ವಸಂತಿ ಮಧ್ವರಾಜ್, ದೀಪಾ ಶೆಟ್ಟಿ, ಮಾಜಿ ಸದಸ್ಯರಾದ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ರಹೀಂ ಕುಂಜೂರು, ಕಾಪು ಯುವವಾಹಿನಿ ಅಧ್ಯಕ್ಷೆ ಸೌಮ್ಯ ರಾಕೇಶ್, ಮಾಜಿ ತಾ. ಪಂ. ಸದಸ್ಯೆ ಯಶೋಧಾ ದೇವಾಡಿಗ, ಬಾಲ ವಿಕಾಸ ಸಮಿತಿ ಸದಸ್ಯ ಶ್ರೀಪತಿ ಉಡುಪ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಸಹಾಯಕಿ ಸುಮಂಗಳಾ, ಆಶಾ ಕಾರ್ಯಕರ್ತೆ ಶ್ರೀಮತಿ, ಮಕ್ಕಳ ಪೋಷಕರು, ಕುಂಜೂರು ಸ್ಪೋರ್ಟ್ಸ್ ಕ್ಲಬ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಪು ತಾಲೂಕಿನ ಮುದರಂಗಡಿ, ಕಾಪು, ಶಿರ್ವ, ಪಡುಬಿದ್ರಿ, ಮೂಡಬೆಟ್ಟು ವಲಯಗಳಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶನದಂತೆ, ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಪುಟ್ಟ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.