ಮತ್ತೆ ನಗರವನ್ನು ಕಾಡಲಿದೆಯೇ ನೀರಿನ ಬರ?
ಬಜೆ ಡ್ಯಾಂ ಗೇಟ್ನಲ್ಲಿ ಸೋರಿಕೆ
Team Udayavani, Dec 28, 2020, 12:21 PM IST
ಉಡುಪಿ, ಡಿ. 27: ನಗರದ ಪಾಲಿನ ಕುಡಿಯುವ ನೀರಿನ ಮೂಲ ಬಜೆ ಡ್ಯಾಂನಲ್ಲಿ ನೀರಿನ ಸೋರಿಕೆಯಾಗುತ್ತಿದೆ. ಈ ಬೇಸಗೆಯಲ್ಲಿ ನಗರಕ್ಕೆ ನೀರಿನ ಬರ ಕಾಡುವುದೇ ಎನ್ನುವ ಆತಂಕ ನಗರ ವಾಸಿಗಳನ್ನು ಕಾಡುತ್ತಿದೆ.
ಬಜೆಯಲ್ಲಿ ಎರಡು ಅಣೆಕಟ್ಟುಗಳಿದ್ದು, ಒಂದು ಮಿನಿ ವಿದ್ಯುತ್ ಸ್ಥಾವರಕ್ಕಾಗಿ, ಇನ್ನೊಂದು ನಗರದ ನೀರಿನ ಬಳಕೆಗಾಗಿ ಇದೆ. ಇಲ್ಲಿ ಸಂಗ್ರಹವಾಗುವ ನೀರು ನಿಗದಿತ ದಿನಗಳವರೆಗೆ ನಗರಕ್ಕೆ ಸಾಕಾಗುತ್ತಿತ್ತು.
ಭಾರೀ ಪ್ರಮಾಣದ ನೀರು ಪೋಲು :
ಸ್ವರ್ಣಾದಲ್ಲಿ ನೀರಿನ ಹರಿವು ಕಡಿಮೆ ಯಾಗಿದೆ. ಈಗಾಗಲೇ ನಗರಸಭೆ ಶಿರೂರಿನಲ್ಲಿ ಸ್ಯಾಂಡ್ ಬ್ಯಾಗ್ ಹಾಕಿ ನೀರನ್ನು ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದೆ. ಇಲ್ಲಿನ ಹೆಚ್ಚುವರಿ ನೀರನ್ನು ಬಜೆ ಡ್ಯಾಂಗೆ ಬಿಡಲಾಗುತ್ತಿದೆ. ಆದರೆ ಇಲ್ಲಿನ ಗೇಟ್ಗಳಲ್ಲಿ ಸೋರಿಕೆ ಕಂಡು ಬಂದಿದೆ. ಮಿನಿ ಹೈಡಲ್ನಲ್ಲಿ ಗೇಟ್ಗಳು ದುರಸ್ತಿಯಾಗದ ಹಿನ್ನೆಲೆಯಲ್ಲಿ ನಿತ್ಯ ಭಾರೀ ಪ್ರಮಾಣದ ಸಂಗ್ರಹ ನೀರು ಪೋಲಾಗುತ್ತಿದೆ. ಇನ್ನೊಂದು ತಿಂಗಳೊಳಗೆ ನದಿಯಲ್ಲಿ ನೀರಿನ ಹರಿವು ಪೂರ್ಣ ಸ್ಥಗಿತವಾಗಲಿದೆ. ಅನಂತರ ನೀರಿನ ಸಂಗ್ರಹ ಅಸಾಧ್ಯ. ನಗರಸಭೆ ಪ್ರಸ್ತುತ ಬಜೆ ಡ್ಯಾಂನಲ್ಲೂ ಸ್ಯಾಂಡ್ ಬ್ಯಾಗ್ ಹಾಕಲು ಸಿದ್ಧತೆ ನಡೆಸುತ್ತಿದೆ. ಆದರೆ ಈ ಬ್ಯಾಗ್ಗಳ ನಡುವೆ ನೀರು ಸೋರಿಕೆಯಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ನೆರೆಗೆ ಕೊಚ್ಚಿ ಹೋಗಿದ್ದ ಗೇಟುಗಳು :
ನಗರಸಭೆ ಈ ಬಾರಿ ಡಿಸೆಂಬರ್ ಮೊದಲ ವಾರದಲ್ಲಿ ನೀರಿನ ಸಂಗ್ರಹಕ್ಕೆ ಮುಂದಾಗಿದೆ. ಬಜೆ ಹಾಗೂ ಮಿನಿ ಡ್ಯಾಂ ಗೇಟ್ 6 ಮೀ. ಎತ್ತರವಾಗಿರುವುದರಿಂದ ಸುಮಾರು ಸುಮಾರು 40 ಮೀ ಜಾಗದಲ್ಲಿ ಉತ್ತಮ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿತ್ತು. ಆದರೆ ಇದೀಗ ಗೇಟುಗಳು ಸೆಪ್ಟೆಂಬರ್ ತಿಂಗಳಿನ ನೆರೆಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಅದರ ದುರಸ್ತಿಗೆ ಖಾಸಗಿ ಸಂಸ್ಥೆ ಮುಂದಾಗಿಲ್ಲ. ಇದರಿಂದಾಗಿ ಭಾರಿ ಪ್ರಮಾಣದ ನೀರು ಹೊರಗಡೆ ಹೋಗುತ್ತಿದೆ.
ಪ್ರತಿದಿನ 24 ದಶ ಲ.ಲೀ.ನೀರು :
ಬಜೆಯಲ್ಲಿ 1972ರ ಜನಸಂಖ್ಯೆ ಹಾಗೂ ಅಭಿವೃದ್ಧಿ ಆಧಾರದ ಮೇಲೆ ಅಣೆಕಟ್ಟು ನಿರ್ಮಿಸಲಾಗಿತ್ತು. ಸ್ವರ್ಣಾ ನದಿಯಿಂದ 2 ಹಂತಗಳಲ್ಲಿ ನಗರಕ್ಕೆ ನೀರು ಸರಬರಾಜಾಗುತ್ತಿದೆ. ಬಜೆ ಅಣೆಕಟ್ಟು ನಿರ್ಮಾಣವಾದ ಬಳಿಕ ಮೊದಲ ಹಂತದಲ್ಲಿ ಪ್ರತಿದಿನ 9 ದಶಲಕ್ಷ ಲೀ. ನೀರು ಸರಬರಾಜು ಆಗಿತ್ತು. 2006ರಲ್ಲಿ ಆರಂಭಗೊಂಡ ಎರಡನೇ ಹಂತದ ಯೋಜನೆಯಲ್ಲಿ ಪ್ರತಿದಿನ 24ದಶ ಲ.ಲೀ. ನೀರು ಸರಬರಾಜು ಯೋಜನೆಯಾಗಿದೆ.
ನೀರಿನ ಬಳಕೆ ಹೆಚ್ಚಳ :
ನಗರದಲ್ಲಿ ಸುಮಾರು 12,500 ಮನೆಗಳು, ಮಣಿಪಾಲ ಕೈಗಾರಿಕಾ ವಲಯದಲ್ಲಿ 70ರಿಂದ 80 ಕೈಗಾರಿಕೆ ಘಟಕ, 570 ಫ್ಲ್ಯಾಟ್ಗಳಿವೆ. ಸುಮಾರು 1,000 ವಾಣಿಜ್ಯ ಸಂಸ್ಥೆಗಳಿವೆ. ಸುಮಾರು 600 ಹೊಟೇಲ್, 40 ಲಾಡ್ಜ್ಗಳಿವೆ. ಸರಕಾರದ ಪ್ರಕಾರ ಪ್ರತಿ ಪ್ರಜೆಗೆ ದಿನಕ್ಕೆ 135 ಲೀ. ನೀರು ಒದಗಿಸಬೇಕು. ನಗರ ಪ್ರದೇಶದ
ಶೇ.90ರಷ್ಟು ವಾಣಿಜ್ಯ ಕಟ್ಟಡಗಳು ನಗರಸಭೆಯ ನೀರನ್ನೇ ಅವಲಂಬಿಸಿರು ವುದರಿಂದ ಬೇಸಗೆ ಕಾಲದಲ್ಲಿ ಹೊಟೇಲ್ಗಳಲ್ಲಿ ನೀರಿನ ಬಳಕೆ ಪ್ರಮಾಣ ಹೆಚ್ಚಾಗಿದೆ. ನಳ್ಳಿ ನೀರು ಸಂಪರ್ಕ 19,200ಕ್ಕೆ ಏರಿಕೆ ಯಾಗಿದೆ. ಈ ಹಿಂದೆ ನಗರಕ್ಕೆ ನೀರಿನ ಪೂರೈಕೆಗೆ ಬಳಸುತ್ತಿದ್ದ ಕೆಲವೊಂದು ತೆರೆದ ಬಾವಿಗಳೂ ಸಹ ಮುಚ್ಚಲ್ಪಟ್ಟಿವೆ.
ನಗರಕ್ಕೆ ಕುಡಿಯುವ ನೀರನ್ನು ಪೂರೈಸಲು ಅಗತ್ಯವಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮೊದಲಿಗೆ ಶಿರೂರಿನಲ್ಲಿ ಸ್ಯಾಂಡ್ ಬ್ಯಾಗ್ ಹಾಕಿ ನೀರನ್ನು ಸಂಗ್ರಹಿಸಲಾಗಿದೆ. ಅಲ್ಲಿನ ಹೆಚ್ಚುವರಿ ನೀರನ್ನು ಬಜೆಗೆ ಬಿಡಲಾಗಿದೆ. ಇಲ್ಲಿ ಸಹ ಮುಂದಿನ ದಿನದಲ್ಲಿ ಸ್ಯಾಂಡ್ ಬ್ಯಾಗ್ ಆಳವಡಿಸಲಾಗುತ್ತದೆ. ನಗರಕ್ಕೆ ನೀರಿನ ಸಮಸ್ಯೆಉಂಟಾಗದಂತೆ ನೋಡಿಕೊಳ್ಳಲಾಗುವುದು. –ಮೋಹನ್ ರಾಜ್, ಎಎಇ, ನಗರಸಭೆ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ