ಬಾಳೆಕುದ್ರು ಶ್ರೀಮಠ ಜೀರ್ಣೋದ್ಧಾರ ಕಾರ್ಯಾರಂಭ; ಪುನಃ ಪ್ರತಿಷ್ಠೆ
Team Udayavani, Aug 23, 2017, 7:00 AM IST
ಕೋಟ: ಇತಿಹಾಸ ಪ್ರಸಿದ್ಧ ಬಾಳೆಕುದ್ರು ಶ್ರೀಮಠದ ನೂತನ ಶಿಲಾಮಯ ಶ್ರೀ ಲಕ್ಷ್ಮೀ ನರಸಿಂಹ, ವಾಗೀಶ್ವರೀ ಶಾರದಾಂಬೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಜನವರಿ ತಿಂಗಳಲ್ಲಿ ಪುನಃ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.
ಪುರಾತನ ಮಠ: ಬಾಳೆಕುದ್ರು ಮಠಕ್ಕೆ ಸಾವಿರಾರು ವರ್ಷದ ಇತಿಹಾಸವಿದ್ದು, 38 ಮಂದಿ ಯತಿಗಳು ಇಲ್ಲಿ ಪೀಠಾಧಿಪತಗಳಾಗಿ ಸೇವೆ ಸಲ್ಲಿಸಿದ್ದಾರೆ. ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ದೇವರಿಗೆ ಬಹಳ ಕಾರಣಿಕ ಶಕ್ತಿ ಇದ್ದು, ಸಾವಿರಾರು ಜನ ಶಿಷ್ಯವರ್ಗವನ್ನು ಈ ಮಠ ಹೊಂದಿದೆ. ಇದೀಗ ದೇವಾಲಯವನ್ನು ಸಂಪೂರ್ಣ ಶಿಲಾಮಯವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ನಿತ್ಯಾನಂದರ ಮಾರ್ಗದರ್ಶನದಂತೆ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ.
ಮಠದ ಪೀಠಾಧಿ ಪತಿಗಳಾದ ಶ್ರೀನƒಸಿಂಹಾಶ್ರಮ ಸ್ವಾಮೀಜಿಯವರ ಸೂಕ್ತ ಸಲಹೆ ಸೂಚನೆ ಮೇರೆಗೆ ದೇವಾಲಯದ ಕೆಲಸಗಳು ನಡೆಯುತ್ತಿದೆ. ಈಗಾಗಲೇ ದೇವಸ್ಥಾನಕ್ಕೆ ಬೇಕಾದ ಕೆತ್ತನೆಯ ಕಲ್ಲುಗಳು ಬಂದಿದ್ದು, ದೇವರ ವಿಗ್ರಹಗಳ ಕತ್ತನೆ ಕೂಡ ನಡೆಯುತ್ತಿದೆ. ಯಾಗಶಾಲೆ, ಸಂಗಮೇಶ್ವರ, ಗಣಪತಿ, ಆಂಜನೇಯ ದೇವಸ್ಥಾನ, ಸ್ವಾಮೀಜಿಗಳ ಬೃಂದಾವನ, ನೂತನ ಸ್ವಯಂಚಾಲಿತ ರಥವನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಲಾಗಿದೆ.
ಒಟ್ಟಾರೆ ಸಾವಿರಾರು ವರ್ಷದ ಇತಿಹಾಸವಿರುವ ಶ್ರೀಮಠದ ಸಂಪೂರ್ಣ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಭಕ್ತಾಧಿಗಳಿಗೆ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ.