ಬ್ರಹ್ಮಾವರ: ಆಗಬೇಕಾಗಿದ್ದು ವಾಕಿಂಗ್ ಟ್ರ್ಯಾಕ್, ಆಗಿದ್ದು ಡಂಪಿಂಗ್ ಯಾರ್ಡ್!
Team Udayavani, Dec 13, 2022, 5:30 AM IST
ಬ್ರಹ್ಮಾವರ: ಇಲ್ಲಿನ ಪೇಟೆಯಿಂದ ಚೇರ್ಕಾಡಿ ವರೆಗೆ ದ್ವಿಪಥ ರಸ್ತೆ ಪೂರ್ಣಗೊಂಡು ಅನುಕೂಲ ಹಾಗೂ ಹೊಸರೂಪವನ್ನು ಕಲ್ಪಿಸಿದೆ. ಆದರೆ ಈಗಾಗಲೇ ಕೃಷಿ ಕೇಂದ್ರದ ತನಕ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ಅಸಹ್ಯ ವಾತಾವರಣ ಸೃಷ್ಟಿಯಾಗಿದೆ.
ಬ್ರಹ್ಮಾವರ ಪೇಟೆಯಿಂದ ಕೃಷಿ ಕೇಂದ್ರ ತನಕ ಸಾಕಷ್ಟು ಮಂದಿ ವಾಕಿಂಗ್, ಹಿರಿಯರು ವಾಯು ವಿಹಾರ, ಮಕ್ಕಳು ಸೈಕ್ಲಿಂಗ್ ನಡೆಸುತ್ತಿದ್ದಾರೆ. ಇವರೆಲ್ಲರಿಗೂ ಅನುಕೂಲವಾಗುವಂತೆ ವಾಕಿಂಗ್ ಟ್ರ್ಯಾಕ್ ಆಗಬೇಕಾದ ಸ್ಥಳ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆ ಆಗುತ್ತಿದೆ. ಪಾದಚಾರಿಗಳೂ ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿ ಇದೆ.
ಪ್ರಶಸ್ತ ಸ್ಥಳ
ಬ್ರಹ್ಮಾವರ ಕೃಷಿ ಕೇಂದ್ರ ಮಧ್ಯೆ ನಾಲ್ಕಾರು ವಸತಿ ಸಮುಚ್ಚಯಗಳಿವೆ. ಇಲ್ಲಿ ನೆಲೆಸಿರುವ ನೂರಾರು ಕುಟುಂಬದವರು ಮತ್ತು ಬ್ರಹ್ಮಾವರ ಪೇಟೆಯ ನಿವಾಸಿಗಳೂ ನಡೆಯಲು ಕೃಷಿ ಕೇಂದ್ರ ರಸ್ತೆಯೇ ಪ್ರಶಸ್ತ ಸ್ಥಳವಾಗಿದೆ. ಆದ್ದರಿಂದ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜತೆಗೆ ಹಸಿ ತಾಜ್ಯ ಮೌಲ್ಯವರ್ಧನೆಗೊಳಿಸುವ ನಿಟ್ಟಿನಲ್ಲಿ ಘಟಕವನ್ನು ಶೀಘ್ರ ಸ್ಥಾಪಿಸು ವಂತೆ ಸಾರ್ವಜನಿಕರು ವಿನಂತಿಸಿದ್ದಾರೆ.
ಶಾಸಕರಲ್ಲಿ ಮನವಿ
ಪಂಚಾಯತ್ ವತಿಯಿಂದ ಎಸ್.ಎಲ್.ಆರ್.ಎಂ. ಅಡಿಯಲ್ಲಿ ಒಣ ಕಸ ಸಂಗ್ರಹಿಸಲಾಗುತ್ತಿದೆ. ಸೂಕ್ತ ಜಾಗ ಒದಗಿದ ತತ್ಕ್ಷಣ ಹಸಿ ಕಸವನ್ನೂ ಸಂಗ್ರಹಿಸಲಾಗುವುದು. ಅಲ್ಲಿಯವರೆಗೆ ಸಾಧ್ಯವಾದಷ್ಟು ಮನೆಯ ವಠಾರದಲ್ಲೇ ವಿಲೇವಾರಿ ಮಾಡಿ ಎಂದು ವಿನಂತಿಸಿದರೂ ರಾತ್ರಿ ಹೊತ್ತು ರಸ್ತೆ ಬದಿಯಲ್ಲೇ ಎಸೆಯುತ್ತಿದ್ದಾರೆ. ಬ್ರಹ್ಮಾವರದಿಂದ ಕೃಷಿ ಕೇಂದ್ರ ವರೆಗೆ ವಾಕಿಂಗ್ ಟ್ರ್ಯಾಕ್ ನಿರ್ಮಿಸುವಂತೆ ಶಾಸಕರಲ್ಲಿ ಮನವಿ ಮಾಡಿದ್ದೇವೆ.
– ಬೇಬಿ ಪೂಜಾರಿ, ಅಧ್ಯಕ್ಷರು, ಚಾಂತಾರು ಗ್ರಾ.ಪಂ.