ಜಾನುವಾರು ಸಾಗಾಟ: ಸಾಸ್ತಾನದಲ್ಲಿ 6 ಮಂದಿ ಬಂಧನ
Team Udayavani, Jul 13, 2019, 9:37 AM IST
ಕೋಟ: ಉತ್ತರ ಕರ್ನಾಟಕ ಭಾಗದಿಂದ ಕಾಸರಗೋಡು ಕಸಾಯಿಖಾನೆಗೆ ಲಾರಿಯಲ್ಲಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಕೋಟ ಪೊಲೀಸರು ಶುಕ್ರವಾರ ಬೆಳಗಿನ ಜಾವ ಸಾಸ್ತಾನ ಟೋಲ್ಗೇಟ್ ಬಳಿ ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಮಂದಿಯನ್ನು ಬಂಧಿಸಲಾಗಿದೆ.
ಮಂಗಳೂರು ಹಾಗೂ ಕಾಸರ ಗೋಡು ನಿವಾಸಿಗಳಾದ ಶಿವಾನಂದ, ಮಾರುತಿ ನಾರಾಯಣ ನಾಯ್ಕ, ಸೈನುದ್ದೀನ್, ಗಣೇಶ್, ಹಮೀದ್ ಸಿ.ಎಚ್. ಹಾಗೂ ಸಮೀರ್ ಬಂಧಿತರು. ಲಾರಿಯಲ್ಲಿ 13 ಕೋಣ ಹಾಗೂ 7 ಎಮ್ಮೆಗಳಿದ್ದವು ಎಂದು ಕಾರ್ಯಾಚರಣೆ ನಡೆಸಿದ ಕೋಟ ಎಸ್ ಐ ನಿತ್ಯಾನಂದ ಗೌಡ ಅವರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ 5 ಗಂಟೆಗೆ ಟೋಲ್ಗೇಟ್ನಲ್ಲಿ ಕೋಟ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಪೊಲೀಸರನ್ನು ಕಂಡು ಲಾರಿ ಚಾಲಕನು ವಾಹನ ಸಹಿತ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆಗ ಪೊಲೀಸರು ತಮ್ಮ ಜೀಪನ್ನು ಅಡ್ಡ ಇಟ್ಟು ಪರಾರಿ ಯಾಗದಂತೆ ತಡೆದರು. ಲಾರಿಯ ಜತೆಗೆ ಬಿಳಿ ಬಣ್ಣದ ಟಾಟಾ ಇಂಡಿಕಾ ಕಾರು ಕೂಡ ಇತ್ತು. ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಜಾನುವಾರುಗಳನ್ನು ಕಾಸರಗೋಡಿನ ಅಬ್ದುಲ್ಲ ಎಂಬಾತನಿಗೆ ಮಾರಲೆಂದು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. 13 ಕೋಣಗಳ ಮೌಲ್ಯ 65,000 ರೂ. ಹಾಗೂ 7 ಎಮ್ಮೆಗೆ 35,000 ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
ಮಾರ್ಬಲ್ ಮಾದರಿಯಲ್ಲಿ ಸಾಗಾಟ
ಸರಕು ಸಾಗಿಸುವ 12 ಚಕ್ರದ ಲೈಲ್ಯಾಂಡ್ ಲಾರಿಯಲ್ಲಿ ಮೇಲ್ಭಾಗದಲ್ಲಿ ಟಾರ್ಪಾಲಿನ್ ಮುಚ್ಚಿಕೊಂಡು ಯಾರಿಗೂ ಅನುಮಾನ ಬಾರದಂತೆ ಟೈಲ್ಸ್, ಮಾರ್ಬಲ್ಸ್ಗಳನ್ನು ಸಾಗಿಸಿದ ರೀತಿಯಲ್ಲಿ ಕೋಣಗಳನ್ನು ಸಾಗಾಟ ಮಾಡಲಾಗುತಿತ್ತು ಹಾಗೂ ವಾಹನದ ನೋಂದಣಿ ನಂಬರ್ ಕೂಡ ರಾಜಸ್ಥಾನದಾಗಿತ್ತು. ಲಾರಿಗೆ ಬೆಂಗಾವಲಾಗಿ ಕಾರು ಬರುತ್ತಿದ್ದು, ಅದರಲ್ಲಿ ಇಬ್ಬರಿದ್ದರು. ಜಾನುವಾರುಗಳನ್ನು ಕಳವು ಮಾಡಿ ಸಾಗಿಸುತ್ತಿದ್ದಿರಬೇಕು ಎಂದು ಶಂಕಿಸಲಾಗಿದೆ
ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.