ಕುಂದಾಪುರ ನಗರಕ್ಕಿಲ್ಲ ಹೆದ್ದಾರಿಯಿಂದ ಪ್ರವೇಶ
ಸಚಿವೆ, ಡಿಸಿಯ ಸೂಚನೆ ಧಿಕ್ಕರಿಸಿದ ಹೆದ್ದಾರಿ ಇಲಾಖೆ ; ಯೋಜನಾ ನಿರ್ದೇಶಕರಿಗೆ ಸಾರ್ವಜನಿಕರ ಮುತ್ತಿಗೆ
Team Udayavani, Aug 28, 2021, 6:30 AM IST
ಕುಂದಾಪುರ: ಇಲ್ಲಿನ ನಗರದಲ್ಲಿ ಹಾದು ಹೋಗುವ ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪ್ರವೇಶ ಕಲ್ಪಿಸಲು ಸದ್ಯ ಅಸಾಧ್ಯ ಎಂದು ಹೆದ್ದಾರಿ ಇಲಾಖೆ ಕೈ ಚೆಲ್ಲಿದೆ. ಈ ಮೂಲಕ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾಧಿಕಾರಿಯ ಸೂಚನೆಯನ್ನು ಧಿಕ್ಕರಿಸಿದ್ದು ಸಾರ್ವಜನಿಕರ ಮನವಿಗೆ ಬೆಲೆಯೇ ಇಲ್ಲದಂತೆ ಮಾಡಿದೆ. ಹೆದ್ದಾರಿ ಮೂಲಕ ಹೋಗುವ ವಾಹನಗಳು ನಗರದೊಳಗೆ ನೇರ ಬರದಂತೆ, ನಗರದ ವ್ಯಾಪಾರ ಆರ್ಥಿಕ ವಹಿವಾಟಿಗೆ ಶಾಶ್ವತ ಹೊಡೆತ ಬೀಳುವಂತಾಗಿದೆ.
ಮನವಿ
ಪುರಸಭೆ ವ್ಯಾಪ್ತಿಯಲ್ಲಿ ಬಸ್ರೂರು ಮೂರುಕೈ ಅಂಡರ್ಪಾಸ್, ಶಾಸ್ತ್ರೀ ಸರ್ಕಲ್ ಫ್ಲೈಓವರ್ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಹಂಗಳೂರು ಪಂಚಾಯತ್ ವ್ಯಾಪ್ತಿಯಲ್ಲಿ ಹೆದ್ದಾರಿ ಯಿಂದ ಸರ್ವಿಸ್ ರಸ್ತೆಗೆ ತೆರಳಲು ಅವಕಾಶ ನೀಡಲಾಗಿದೆ. ಇದು ಕುಂದಾಪುರ ನಗರಕ್ಕೂ ಅನ್ವಯ. ಇದರ ಹೊರತಾಗಿ ಹೆದ್ದಾರಿಯಲ್ಲಿ ಚಲಿಸಿದರೆ ಎಪಿಎಂಸಿ ಬಳಿ ಇಳಿದುಕೊಳ್ಳಬೇಕು. ಅನಂತರ ನಗರದ ಪ್ರವೇಶಕ್ಕೆ ವಾಹನಗಳು ಪರದಾಡಬೇಕು. ಆದ್ದರಿಂದ ಅಂಡರ್ಪಾಸ್ ಮುಗಿದು, ಫ್ಲೈಓವರ್ ಆರಂಭವಾಗುವಲ್ಲಿ ಸರ್ವಿಸ್ ರಸ್ತೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದರು. ಬೊಬ್ಬರ್ಯನಕಟ್ಟೆ ಬಳಿ 15ಕ್ಕೂ ಅಧಿಕ ಇಲಾಖಾ ಕಚೇರಿಗಳು, ಕಲ್ಯಾಣಮಂಟಪ ಇತ್ಯಾದಿಗಳಿವೆ. ಜನರ ಓಡಾಟ ನಿರಂತರವಾಗಿರುತ್ತದೆ. ನಗರಕ್ಕೆ ಬರುವ ವಾಹನಗಳಿಗೂ ಅನುಕೂಲ ಎಂದು ಉಲ್ಲೇಖೀಸಲಾಗಿತ್ತು.
ಸೂಚನೆ
ಸಾರ್ವಜನಿಕರ ಮನವಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಆಹಾರ ನಿಗಮ ಉಪಾಧ್ಯಕ್ಷ ಕಿರಣ್ ಕೊಡ್ಗಿ ಅವರ ಮನವಿಯಂತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಹೆದ್ದಾರಿ ಇಲಾಖೆಗೆ ವಾಹನ ಓಡಾಟಕ್ಕೆ ಅನುವು ಮಾಡುವಂತೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿಯೂ ಕೂಡ ಸಚಿವೆಯ ಸೂಚನೆಯಂತೆ ಪರಿಶೀಲಿಸಿ ಕ್ರಮಕೈಗೊಳ್ಳಲು ಪತ್ರ ಬರೆದಿದ್ದರು.
ಇದನ್ನೂ ಓದಿ:ವಿಮಾನ ಚಲಿಸುತ್ತಿರುವಾಗಲೇ ಪೈಲಟ್ಗೆ ಹೃದಯಾಘಾತ; ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶ
ಅಸಾಧ್ಯ ಎಂದ ಪಿಡಿ
ಶುಕ್ರವಾರ ಕುಂದಾಪುರಕ್ಕೆ ದಿಢೀರ್ ಆಗಮಿಸಿದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶುಮೋಹನ್ ಸ್ಥಳ ಪರಿಶೀಲಿಸುತ್ತಿದ್ದಂತೆ ಸಾರ್ವ ಜನಿಕರು ಮನವಿ ಮಾಡಿದರು. ನಗರದೊಳಗೆ ಪ್ರವೇಶಿಸಲು ಎಲ್ಲಿಯೂ ಅವಕಾಶ ನೀಡಿಲ್ಲ. ಜನರಿಗೆ ರಸ್ತೆ ದಾಟುವುದಷ್ಟೇ ಅಲ್ಲ ವಾಹನಗಳು ನಗರ ದೊಳಗೆ ಬರಲೂ ತೊಂದರೆ ಆಗುತ್ತಿದೆ ಎಂದರು.
ಅಪಘಾತ ವಲಯ ವಾಗುವ ಸಾಧ್ಯತೆ ಇರುವ ಕಾರಣ ತೆರವು ಅಸಾಧ್ಯ ಎಂದು ಅಧಿಕಾರಿ ಹೇಳಿದರು. ಇದರಿಂದ ಸಾರ್ವಜನಿಕರು ಆಕ್ರೋಶ ಗೊಂಡು ಅವರ ವಾಹನಕ್ಕೆ ಮುತ್ತಿಗೆ ಹಾಕಿದರು. ಪ್ರವೇಶಕ್ಕೆ ಅವಕಾಶ ನೀಡಲು ನನ್ನ ಸಹಮತ ಇಲ್ಲ, ಸುರಕ್ಷೆ ತಪಾಸಣೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಿದ ಬಳಿಕ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಎಲ್ಲೆಡೆ ತೆರೆದಿದೆ
ಬ್ರಹ್ಮಾವರ, ಕೋಟ ಮೊದಲಾದೆಡೆ ಹೆದ್ದಾರಿಯಿಂದ ನಗರ ಪ್ರವೇಶಕ್ಕೆ ಬಿಡಲಾಗಿದ್ದು ಕುಂದಾಪುರಕ್ಕೆ ಯಾಕೆ ಅಸಾಧ್ಯ ಎಂದು ಸಾರ್ವಜನಿಕರು ಪ್ರಶ್ನಿಸಿದರು. ಇತರ ಕಡೆಗಳ ಸುದ್ದಿ ಇಲ್ಲಿ ಬೇಡ, ಇಲ್ಲಿಗೆ ಆಗದು ಎಂದಷ್ಟೇ ಉತ್ತರಿಸಿದರು ಅಧಿಕಾರಿ. ರಸ್ತೆ ನಿರ್ಮಾಣದ ನಕ್ಷೆ ನೀಡಿ, ಪೂರ್ವದಲ್ಲೇ ಯಾಕೆ ಅದನ್ನು ಸೂಚಿಸಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಿಲ್ಲ.
ಆರ್ಥಿಕತೆಗೆ ಹೊಡೆತ
ಕುಂದಾಪುರ ನಗರದಲ್ಲಿ 2,332 ವಾಣಿಜ್ಯ ಪರವಾನಿಗೆಗಳಿವೆ. ನಗರಕ್ಕೆ ಜನರ ಆಗಮನ ಕಡಿಮೆಯಾದರೆ ಸಾವಿರಾರು ಮಂದಿಗೆ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ. ಹೆದ್ದಾರಿಯಲ್ಲಿ ಹಾದು ಹೋಗುವವರು ಕುಂದಾಪುರದಲ್ಲಿ ಹೊಟೇಲ್, ಬಟ್ಟೆ, ಆಭರಣ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದರು. ಅದಕ್ಕೆಲ್ಲ ಕಡಿವಾಣ ಬಿದ್ದಂತಾಗಿದೆ. ಸರಕಾರಿ ಬಸ್ಗಳು ಫ್ಲೈಓವರ್ ಮೂಲಕವೇ ಹೋಗಿ ಬಸ್ ನಿಲ್ದಾಣಕ್ಕೆ ತೆರಳಿ ಅನಂತರ ಶಾಸ್ತ್ರೀಪಾರ್ಕ್ಗೆ ಬರುತ್ತಿರುವ ಕಾರಣ ಜನ ಸರಕಾರಿ ಬಸ್ ಏರುವುದನ್ನು ತೊರೆಯುತ್ತಿದ್ದಾರೆ. ಎಪಿಎಂಸಿ ಬಳಿ ಯೂ ಟರ್ನ್ ನೀಡಿದ ಕಾರಣ ಅಪಘಾತ ವಲಯವಾಗಿ ಮಾರ್ಪಾಡಾಗುತ್ತಿದೆ. ದುರ್ಗಾಂಬಾ ಬಳಿ ಸರ್ವಿಸ್ ರಸ್ತೆಗೆ ತಿರುಗಲು ತಿಳಿಯದೇ ಕುಂದಾಪುರಕ್ಕೆ ಬರುವ ವಾಹನದಲ್ಲಿರುವವರು ಗೊಂದಲಕ್ಕೆ ಒಳಗಾಗಿ ಫ್ಲೈಓವರ್ ಯಾನ ಮುಗಿಸಿ ಪ್ರದಕ್ಷಿಣೆ ಹಾಕಿ ಬರುವ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಅಂಡರ್ಪಾಸ್ ಮುಗಿದು ನೂರಿನ್ನೂರು ಮೀ. ಬಳಿಕ ಫ್ಲೈಓವರ್ ಆರಂಭವಾಗುವ ಮುನ್ನ ವಾಹನಗಳು ಸರ್ವಿಸ್ ರಸ್ತೆಗೆ ಮೈದಾನ ಕಡೆಗೆ ಇಳಿಯುವಂತೆ, ನಂದಿನಿ ಸ್ಟಾಲ್ ಬಳಿ ಹೆದ್ದಾರಿಗೆ ಹತ್ತುವಂತೆ ಅವಕಾಶ ನೀಡಿದರೆ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ. ಇಲ್ಲದಿದ್ದರೆ ಬಸ್ರೂರು ಕಡೆಯಿಂದ ಮೂರುಕೈ ಅಂಡರ್ಪಾಸ್ ಮೂಲಕ ಬರುವ ವಾಹನ ಹಳೆ ಆದರ್ಶ ಆಸ್ಪತ್ರೆ ಬಳಿಯೇ ಹೆದ್ದಾರಿ ಸೇರಿಕೊಳ್ಳಬೇಕು.
ಸ್ಕೈಪಾತ್ ಪ್ರಸ್ತಾವ
ಸಾರ್ವಜನಿಕರ ಓಡಾಟಕ್ಕಾಗಿ ಬೊಬ್ಬರ್ಯನಕಟ್ಟೆ ಬಳಿ ಪಾದಚಾರಿ ಮೇಲ್ಸೇತುವೆ ರಚಿಸಲು ಪ್ರಸ್ತಾವನೆ ನೀಡಲಿದ್ದೇನೆ. ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡುವುದು ಅಪಘಾತ ವಲಯ ವಾಗುವ ಸಾಧ್ಯತೆ ಇರುವುದರಿಂದ ಸುರಕ್ಷೆಯ ದೃಷ್ಟಿಯಿಂದ ಸಾಧುವಲ್ಲ. ಆದರೂ ತಾಂತ್ರಿಕ ಪರಿಣತರು ಪರಿಶೀಲಿಸಿ ವರದಿ ನೀಡಲಿ ದ್ದಾರೆ.
-ಶಿಶುಮೋಹನ್, ಯೋಜನಾ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…