ಜನಸ್ನೇಹಿ ಪೊಲೀಸಿಂಗ್: ಡಾ| ಪಾಟೀಲ್
Team Udayavani, Aug 11, 2017, 8:45 AM IST
ಉಡುಪಿ: ಉಡುಪಿ ಜಿಲ್ಲಾ 13ನೇ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಆಗಿ ಡಾ| ಸಂಜೀವ ಎಂ. ಪಾಟೀಲ್ ಬನ್ನಂಜೆಯಲ್ಲಿರುವ ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಮುಖಾಂತರ ಮಂಗಳೂರಿನ ಕಮಿಷನರೆಟ್ ವ್ಯಾಪ್ತಿಯಲ್ಲಿ ಇರುವಂತೆ ಉಡುಪಿ ಜಿಲ್ಲೆ ಯಲ್ಲಿ ಪೊಲೀಸ್ ಇಲಾಖಾ ಫೋನ್ ಇನ್ ಕಾರ್ಯಕ್ರಮ ವನ್ನು ನಡೆಸಲು ಉದ್ದೇಶಿಸಿದ್ದೇನೆ. ವಾರದಲ್ಲಿ ಒಂದು ದಿನ, ಒಂದು ಗಂಟೆ ಸಾರ್ವಜನಿಕರೊಂದಿಗೆ ಫೋನ್ ಇನ್ ಮೂಲಕ ಮಾತುಕತೆ ನಡೆಸಿ ಸಮಸ್ಯೆ ತಿಳಿದುಕೊಂಡು ಪರಿ ಹಾರಕ್ಕೆ ಯತ್ನಿಸಲಾಗುವುದು. ಈ ಮೂಲಕ ಜನಸ್ನೇಹಿ ಪೊಲೀಸಿಂಗ್ ವ್ಯವಸ್ಥೆ ರೂಪಿಸಲಾಗುವುದು ಎಂದರು.
ಕಳೆದೊಂದು ವರ್ಷದಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಕೆ.ಟಿ. ಬಾಲಕೃಷ್ಣ ಅವರು 2016 ಆ. 11ರಂದು (ಗುರುವಾರ) ಅಧಿಕಾರ ಸ್ವೀಕರಿಸಿಕೊಂಡಿದ್ದರು. ಅದೇ ರೀತಿ ಬಾಲಕೃಷ್ಣ ಅವರು ಎಸ್ಪಿ ಡಾ| ಸಂಜೀವ ಪಾಟೀಲ್ ಅವರಿಗೆ 2017 ಆ. 10 (ಗುರುವಾರ) ಅಧಿಕಾರ ಹಸ್ತಾಂತರಿಸಿದ್ದಾರೆ.
ಡಾ| ಪಾಟೀಲ್ 2006ರ ಕೆಎಸ್ಪಿಎಸ್ ಬ್ಯಾಚ್ನವರು.
ಪ್ರಸಕ್ತ ವರ್ಷ ಐಪಿಎಸ್ ಆಗಿ ಪದೋನ್ನತಿ ಪಡೆದು ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಕೇಂದ್ರ ಕಚೇರಿಯಲ್ಲಿ ಎಸ್ಪಿಯಾಗಿದ್ದರು. ಅದಕ್ಕೂ ಮುನ್ನ ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ಡಿಸಿಪಿ ಯಾಗಿ ಹಾಗೂ ಗುಲ್ಬರ್ಗಾ, ಬೆಳಗಾವಿ, ಬಳ್ಳಾರಿ, ಹುಬ್ಬಳ್ಳಿ-ಧಾರವಾಡದಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರು. ಉತ್ತಮ ಸೇವೆಗಾಗಿ ಅವರು 2013ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದಿದ್ದರು.
ಎಲ್ಲ ಠಾಣೆಗಳಿಗೂ ಭೇಟಿ
ಉಡುಪಿ ಜಿಲ್ಲೆಗೆ ಪ್ರಥಮ ಭೇಟಿ ಇದಾಗಿದ್ದು, ಇಲ್ಲಿನ ಚಿತ್ರಣವನ್ನು ಅರಿತುಕೊಂಡು ಎಲ್ಲ ಪೊಲೀಸ್ ಠಾಣೆಗಳಿಗೆ ಭೇಟಿ ಕೊಡಲಿದ್ದೇನೆ. ಸಾಧ್ಯವಾದರೆ ಹಳ್ಳಿಗಳಿಗೆ ಸ್ವತಃ ತೆರಳಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡ ಲಿದ್ದೇನೆ. ಈ ಬಗ್ಗೆ ಹಿಂದಿನ ಎಸ್ಪಿಗಳಾದ ಅಣ್ಣಾಮಲೈ, ಕೆ.ಟಿ. ಬಾಲಕೃಷ್ಣ ಅವರೊಂದಿಗೆ ಸಮಾ ಲೋಚನೆ ನಡೆಸಿದ್ದೇನೆ. ಮಂಗಳೂರಿನಲ್ಲಿದ್ದಾಗ ಸ್ವಲ್ಪ ತುಳು ಕಲಿ ತಿ ದ್ದೇನೆ. ಉಡುಪಿ ಜಿಲ್ಲೆಯಲ್ಲಿದ್ದುಕೊಂಡು ಸಂಪೂರ್ಣ ವಾಗಿ ಕಲಿಯುವ ಆಸೆ ಇದೆ ಎಂದರು.
ಅಕ್ರಮ ದಂಧೆ ನಿಲ್ಲಿಸಿ
ಜಿಲ್ಲೆಯಲ್ಲಿ ಮಟ್ಕಾ, ಗ್ಯಾಂಬ್ಲಿಂಗ್ನಂತಹ ಯಾವುದೇ ಅಕ್ರಮ ದಂಧೆಗಳು ನಡೆಯುತ್ತಿದ್ದರೆ ಅದನ್ನು ಕೂಡಲೇ ನಿಲ್ಲಿಸಬೇಕು. ಅಧಿಕಾರಿಗಳಿಗೂ ಈ ಬಗ್ಗೆ ನಿರ್ದೇಶ ಕೊಟ್ಟಿದ್ದೇನೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಸಾರ್ವ ಜನಿಕರು ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವೆ. ಒಂದು ವೇಳೆ ಅಧಿಕಾರಿಗಳು ಅಕ್ರಮ ಚಟುವಟಿಕೆಯಲ್ಲಿ ಕೈಜೋಡಿಸಿದ್ದು ಗೊತ್ತಾದರೂ ಅವರ ವಿರುದ್ಧ ಏನು ಮಾಡಬೇಕೋ ಅದನ್ನು ಮಾಡುವೆ. ಜನರ ಆಶೋತ್ತರಗಳಿಗೆ ಸ್ಪಂದಿಸುವೆ. ಕಾನೂನು ಕೈಗೆತ್ತಿಕೊಳ್ಳುವವರು ಯಾವುದೇ ಪಕ್ಷ, ಧರ್ಮ, ಜಾತಿಯವರೇ ಆಗಲಿ ಅವರಿಗೆ ತಕ್ಕ ಶಾಸ್ತಿ ಮಾಡುವೆ ಎಂದು ಹೇಳಿದ ಡಾ| ಸಂಜೀವ ಪಾಟೀಲ್, ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಕಾನೂನು ಸುವ್ಯವಸ್ಥೆ ನಿಭಾಯಿಸಿದ್ದೇನೆ. ಇಲಾಖೆ ಯಲ್ಲಿ ಲೋಪಗಳಾದಾಗ ಮಾಧ್ಯಮ ಗಳು ಕಣ್ತೆರೆಸುವ ಕೆಲಸ ಮಾಡ ಬಹುದು ಎಂದರು.