ಚಂಡಮಾರುತ ಆಶ್ರಯತಾಣ ಶೀಘ್ರ ಲೋಕಾರ್ಪಣೆ
Team Udayavani, Mar 12, 2019, 1:00 AM IST
ತೆಕ್ಕಟ್ಟೆ: ಕೇಂದ್ರ ಸರಕಾರದ ಯೋಜನೆಯನ್ವಯ ನಿರ್ಮಾಣಗೊಳ್ಳುತ್ತಿರುವ ಚಂಡಮಾರುತ ಆಶ್ರಯತಾಣ (ಸೈಕ್ಲೋನ್ ಶೆಲ್ಟರ್) ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಸುಮಾರು 2.60 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು ಸುವ್ಯವಸ್ಥಿತ ಕಟ್ಟಡ ನಗರದಲ್ಲಿ ನಿರ್ಮಾಣವಾಗುತ್ತಿದೆ.
ಶೀಘ್ರ ಪೂರ್ಣ
ಕೇಂದ್ರ ಸರಕಾರದ ಶೇ.60 ಹಾಗೂ ರಾಜ್ಯ ಸರಕಾರದ ಶೇ.40 ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು ಯೋಜನೆಗೆ ಉಡುಪಿ ಜಿಲ್ಲೆಯ ಕಾಪು ಹಾಗೂ ತೆಕ್ಕಟ್ಟೆ ಆಯ್ಕೆಯಾಗಿದೆ.
ಈಗಾಗಲೇ ವಿಶ್ವ ಬ್ಯಾಂಕ್ ಅಧಿಕಾರಿಗಳ ತಂಡ ಪರಿಶೀಲಿಸಿ, ಸೂಕ್ತ ಮಾರ್ಗದರ್ಶನ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಮತ್ತಷ್ಟು ವೇಗವನ್ನು ಪಡೆದುಕೊಂಡಿದೆ. ಮೇ ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣವಾಗಲಿದೆ.
ಕಟ್ಟಡದ ವೈಶಿಷ್ಟ
ಪ್ರಾಕೃತಿಕ ವಿಕೋಪ, ಚಂಡಮಾರುತದ ವೇಳೆ ನಿರಾಶ್ರಿತರಾಗುವ ಜನರಿಗೆ ತತ್ಕ್ಷಣ ತುರ್ತು ಸ್ಪಂದನೆ ನೀಡುವ ನಿಟ್ಟಿನಲ್ಲಿ ಕಟ್ಟಡವಿರಲಿದೆ. ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಕೊಠಡಿ, ಬೆಡ್ ಇರುವ ವಿಶ್ರಾಂತಿ ಕೊಠಡಿ, ಸಭಾಂಗಣ, ಭೋಜನ ಶಾಲೆ ಒಳಗೊಂಡಿದೆ. ವಯೋವೃದ್ಧರಿಗೆ ಹಾಗೂ ವಿಶೇಷ ಚೇತನರಿಗೆ ನೆಲಮಹಡಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
750ಕ್ಕೂ ಅಧಿಕ ಮಂದಿ ಇಲ್ಲಿ ಆಶ್ರಯ ಪಡೆಯಬಹುದು. ಮೇಲ್ಮಹಡಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಜನರೇಟರ್, ಕಟ್ಟಡದ ಸುತ್ತಲೂ ತಡೆಗೋಡೆ, ವ್ಯವಸ್ಥಿತ ಒಳಚರಂಡಿ, ಇಂಟರ್ ಲಾಕ್ ಹಾಗೂ ಸುಮಾರು 36 ಸಾವಿರ ಲೀಟರ್ ಸಾಮರ್ಥ್ಯದ ಅಂಡರ್ ವಾಟರ್ ಟ್ಯಾಂಕ್ ಇತ್ಯಾದಿಗಳನ್ನು ನಿರ್ಮಿಸಲಾಗಿದೆ.
ಪ್ರಾಕೃತಿಕ ವಿಕೋಪದ ಸನ್ನಿವೇಶ ಇಲ್ಲದ ಸಂದರ್ಭದಲ್ಲಿ ಈ ಕಟ್ಟಡವನ್ನು ಶಾಲೆ, ಸಮಾಜಮುಖೀ ಕಾರ್ಯಗಳಿಗೆ ಬಳಸಬಹುದಾಗಿದೆ.
ತುರ್ತು ರಕ್ಷಣೆ
ಚಂಡಮಾರುತ ಆಶ್ರಯತಾಣವು ಅತ್ಯಾಧುನಿಕ ವೈಜ್ಞಾನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ನಿರಾಶ್ರಿತರಿಗೆ ತುರ್ತು ರಕ್ಷಣೆ ನೀಡಿ ಆಶ್ರಯ ಕಲ್ಪಿಸುವುದೇ ಇದರ ಮೂಲ ಉದ್ದೇಶ. ಮೇ ತಿಂಗಳ ಅಂತ್ಯದಲ್ಲಿ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ.
-ಕೆ.ಎಸ್.ಚಂದ್ರಶೇಖರ್, ಕಾರ್ಯನಿರ್ವಾಹಕ ಪಿಡಬ್ಲ್ಯುಡಿ ಎಂಜಿನಿಯರ್