ಕೆರ್ವಾಶೆ: ಅಂಗವಿಕಲ ಮಗನನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡ ತಂದೆ
Team Udayavani, Jun 18, 2022, 7:36 PM IST
ಅಜೆಕಾರು: ಅಂಗವಿಕಲ ಮಗನನ್ನು ಬಾವಿಗೆ ತಳ್ಳಿ ಬಳಿಕ ತಂದೆ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದಲ್ಲಿ ಜೂ. 18ರಂದು ನಡೆದಿದೆ.
ಕೆರ್ವಾಶೆ ಗ್ರಾಮದ ಶೆಟ್ಟಿಬೆಟ್ಟು ಸಮೀಪದ ಪಾಚರಬೆಟ್ಟು ನಿವಾಸಿ ಕೃಷ್ಣ ಪೂಜಾರಿ(55)ಅವರು ವಿಕಲಚೇತನ ಮಗ ದೀಪೇಶ್ (26) ಅವರನ್ನು ಬಾವಿಗೆ ತಳ್ಳಿ ಆತ ಮೃತಪಟ್ಟ ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷ್ಣ ಪೂಜಾರಿ ಅವರು ಪತ್ನಿ ಹಾಗೂ ಅಂಗವಿಕಲ ಮಗ ದೀಪೇಶ್ ಜತೆ ವಾಸವಿದ್ದು, ಇತ್ತೀಚಿನ ಕೆಲವು ವರ್ಷಗಳಿಂದ ಪತ್ನಿಯೂ ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೃಷ್ಣ ಪೂಜಾರಿಯವರು ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡಬೇಕಿತ್ತು. ಆದರೆ ಇಬ್ಬರ ಆರೈಕೆ ಮಾಡಿ ಕೆಲಸಕ್ಕೆ ಹೋಗುವುದು ಅಸಾಧ್ಯವಾಗಿತ್ತು. ಜೀವನ ನಿರ್ವಹಣೆ ಕಷ್ಟವಾಗಿದ್ದು, ಇದ್ದರಿಂದ ಜೀವನದಲ್ಲಿ ನೊಂದು ಜೂ. 18ರಂದು ಮಗ ದೀಪೇಶ್ನನ್ನು ಬಾವಿಗೆ ತಳ್ಳಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.