ತಂಡವಾಗಿ ಕಾರ್ಯ ನಿರ್ವಹಣೆ: ಸುನಿಲ್ ಕುಮಾರ್
Team Udayavani, Aug 5, 2021, 7:50 AM IST
ಮೋದಿ ಮಾದರಿಯ ಆಡಳಿತ ಕರ್ನಾಟಕದಲ್ಲೂ ಬರಬೇಕು ಎನ್ನುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರ ನೇತೃತ್ವ ದಲ್ಲಿ ನಾವೆಲ್ಲರೂ ಒಂದು ತಂಡವಾಗಿ ಕಾರ್ಯನಿರ್ವಹಿಸಲಿದ್ದೇವೆ ಎಂದು ಕಾರ್ಕಳ ಶಾಸಕರಾಗಿರುವ ನೂತನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಈ ಬಾರಿಯ ಸಚಿವ ಸಂಪುಟಕ್ಕೆ ಪರಿಗಣಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಅದರಂತೆ ಸಚಿವ ಸ್ಥಾನ ಸಿಕ್ಕಿದೆ. ಶಾಸಕನಾಗಿ ಹಾಗೂ ಕಾರ್ಯಕರ್ತನಾಗಿ ಪಕ್ಷದ ಚಟುವಟಿಕೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದೇನೆ. ಮೋದಿ ಮಾದರಿಯ ಆಡಳಿತ ದೇಶದಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಒಂದು ತಂಡವಾಗಿ ಕಾರ್ಯನಿರ್ವಹಿಸಲಿದ್ದೇವೆ. ತಂಡದ ಸದಸ್ಯನಾಗಿ ನನಗೆ ಯಾವ ಜವಾಬ್ದಾರಿ ನೀಡುತ್ತಾರೋ ಅದನ್ನು ಪ್ರಾಮಾಣಿಕವಾಗಿ ನಿಭಾಯಿಸಲಿದ್ದೇನೆ ಎಂದು ಹೇಳಿದರು.
ಹಿಂದುತ್ವ ಹಾಗೂ ಅಭಿವೃದ್ಧಿಯಲ್ಲಿ ಜನಹಿತ, ಜನ ಪ್ರಿಯವಾದ ಆಡಳಿತ ನೀಡಲಿದ್ದೇವೆ. ಕರ್ನಾಟಕದ ಜನಮಾನಸದಲ್ಲಿ ಜನ ಮೆಚ್ಚುವ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದೇವೆ. ಜನರಲ್ಲಿ ನಮ್ಮ ಮೇಲೆ ದೊಡ್ಡ ಪ್ರಮಾಣದ ನಿರೀಕ್ಷೆಯಿದೆ. ಯಾವುದೇ ಖಾತೆಯ ನಿರೀಕ್ಷೆಯಿಲ್ಲ. ಮುಖ್ಯಮಂತ್ರಿಗಳು ಯಾವ ಖಾತೆ ನೀಡುತ್ತಾರೋ ಅದರಂತೆ ಕಾರ್ಯನಿರ್ವಹಿಸಲಿದ್ದೇನೆ ಎಂದರು.