ರಸ್ತೆಯೊಂದು ಆದರೆ ಅರ್ಧ ಸಮಸ್ಯೆ ಕಳೆದಂತೆ
ಒಳಚರಂಡಿ ಕಾಮಗಾರಿಗೆ ಚಾಲನೆ ದೊರೆತಿಲ್ಲ
Team Udayavani, Feb 11, 2020, 5:56 AM IST
ಕುಂದಾಪುರ: ಕವಿ ರವೀಂದ್ರನಾಥ ಠಾಗೋರರನ್ನು ನೆನಪಿಸುವ ಶಾಂತಿನಿಕೇತನ ಎಂಬ ಸುಂದರ ಹೆಸರಿನ ವಾರ್ಡ್ನಲ್ಲಿ ಚರಂಡಿ ಹಾಗೂ ರಸ್ತೆಯದ್ದೇ ಪ್ರಮುಖ ಬೇಡಿಕೆ. ಈ ವಾರ್ಡ್ನ ವಿಸ್ತಾರ ದೊಡ್ಡದಿದೆ. ಪ್ರಮುಖವಾಗಿ ಕೇಳಿಬಂದ ಬೇಡಿಕೆಗಳು ಮಾತ್ರ ಮೂರು.
ಕೆರೆ ಗೋಡೆ ಕುಸಿತ
ನಾಗ ದೇವಸ್ಥಾನದ ಬಳಿ ಇರುವ ಕೆರೆಯ ತಡೆಗೋಡೆ ಕುಸಿದು ಏಳೆಂಟು ತಿಂಗಳಾಗಿದೆ. ಬಂತು. ಪುರಸಭೆಯವರು ಮರಳಿನ ಚೀಲ ಇಟ್ಟು ತಾತ್ಕಾಲಿಕ ಪರಿಹಾರ ಮಾಡಿದಾರೆ. ಆದರೆ ಶಾಶ್ವತ ಕಾಮಗಾರಿಗೆ ಅನುದಾನದ ಕೊರತೆಯಿದೆ. ಈ ಮರಳಿನ ಚೀಲಗಳು ಮೇಲಿರುವ ರಸ್ತೆಯ ವಾಹನಗಳ ಓಡಾಟ ಭಾರದಿಂದ ಕೆರೆಯ ಕಡೆಗೆ ವಾಲಿವೆ. ಆದ್ದರಿಂದ ಕುಸಿತದ ಆತಂಕ ಮೂಡಿದೆ. ಇದಕ್ಕೊಂದು ಪರಿಹಾರ ರೂಪ ಒದಗಿಸಿ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಚರಂಡಿ ನೀರು
ಚರಂಡಿಯಲ್ಲಿ ನೀರು ಹರಿಯುವುದಿಲ್ಲ. ಕಾರಣ ಅವುಗಳು ಅಷ್ಟು ವ್ಯವಸ್ಥಿತವಾಗಿಲ್ಲ. ನೀರು ನಿಲ್ಲುವ ಕಾರಣ ಅಕ್ಕಪಕ್ಕದ ಮನೆಗಳ ಬಾವಿಗಳ ನೀರೂ ಕೂಡಾ ಚರಂಡಿ ನೀರಿನಿಂದ ಕಲುಷಿತವಾಗುತ್ತದೆ. ಕುಡಿಯುವ ನೀರು ಕೆಂಬಣ್ಣಕ್ಕೆ ತಿರುಗಿರುತ್ತದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಆದ್ದರಿಂದ ಒಳ್ಳೆ ರೀತಿಯ ಚರಂಡಿ ಮಾಡಿಕೊಟ್ಟರೆ ನಮ್ಮ ಸಮಸ್ಯೆಗೆ ಇತಿಶ್ರೀ ಹಾಡಿದಂತೆ ಎನ್ನುತ್ತಾರೆ.ರಸ್ತೆ ಮಣ್ಣಿನ ಕಚ್ಚಾ ರಸ್ತೆಯಿದ್ದು ಕಾಂಕ್ರೀಟ್ ರಸ್ತೆಬೇಕು.
ರಿಂಗ್ರೋಡ್ ಬೇಕು
ಸಂಗಮ್ನಿಂದ ಈಸ್ಟ್ವೆಸ್ಟ್ ಗೆ ಮುಖ್ಯರಸ್ತೆ ಸಂಧಿಸುವ ರಿಂಗ್ರೋಡ್ ಮಾಡಿದರೆ ಅನುಕೂಲ ವಾಗುತ್ತದೆ. ಆಗ ನಾವು ಎಲ್ಲೂ ಮುಖ್ಯ ರಸ್ತೆ ಯನ್ನು ಆಶ್ರಯಿಸಬೇಕಾದ ಅಗತ್ಯವೇ ಇರುವುದಿಲ್ಲ. ಈಗ ಸರ್ವಿಸ್ ರಸ್ತೆ, ಮುಖ್ಯ ರಸ್ತೆಗೆ ಪ್ರವೇಶಿಸುವುದೇ ಕಷ್ಟವಾಗಿದೆ. ಹಾಗಾಗಿ ರಿಂಗ್ರೋಡ್ ಮಾಡುವ ಮೂಲಕ ಸಮಸ್ಯೆ ನಿವಾರಿಸಬೇಕು ಎನ್ನುವುದು ಇಲ್ಲಿನ ಜನರ ಬೇಡಿಕೆ. ಹೆದ್ದಾರಿ ಕಾಮಗಾರಿ ಮಾಡು ವವರು ಸರ್ವಿಸ್ ರಸ್ತೆಯಿಂದ ವಾರ್ಡ್ಗೆ ಹೋಗುವ ಒಳರಸ್ತೆಗಳನ್ನು ಸಂಧಿಸುವಲ್ಲಿ ಅಗೆದು ಹಾಕಿ ಸಂಪರ್ಕವನ್ನೇ ಅಸ್ತವ್ಯಸ್ಥಗೊಳಿ ಸಿದ್ದಾರೆ. ಈ ಕುರಿತು ಗಮನ ಹರಿಸಬೇಕಾದ ಅನಿವಾರ್ಯ ಇದೆ. ಬಬ್ಬರ್ಯನ ಕಟ್ಟೆ ಹೊಳಬದಿ ಹೋಗುವ ರಸ್ತೆ ಮಣ್ಣಿನ ಕಚ್ಚಾ ರಸ್ತೆಯಿದ್ದು ಕಾಂಕ್ರೀಟ್ ರಸ್ತೆಬೇಕು.
ರಸ್ತೆ ಬೇಕು
ಕೆರೆಯ ಒಂದು ಮಗ್ಗುಲಲ್ಲಿ ಅಗಲ ಕಿರಿದಾದ ರಸ್ತೆಯಿದೆ. ಇನ್ನೊಂದು ಮಗ್ಗುಲಲ್ಲಿ ಅಗಲವಾದ ರಸ್ತೆಯಿದ್ದರೂ ವಾಹನಗಳ ಓಡಾಟಕ್ಕೆ ಅನುಕೂಲಕರವಾಗಿಲ್ಲ. ಈ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ಅದು ಇನ್ನೊಂದು ಬದಿ ಇರುವ 14 ಅಡಿ ಅಗಲದ ರಸ್ತೆಗೆ ಸೇರಿಕೊಳ್ಳುತ್ತದೆ. ಘನವಾಹನಗಳ ಓಡಾಟಕ್ಕೂ ನೆರವಾಗಲಿದೆ.
ದೀಪ ಬೆಳಗಿತು
ಕಳೆದ ಮೂರು ವರ್ಷಗಳಿಂದ ಈ ಪ್ರದೇಶದ ಕೆಲವೆಡೆ ಬೀದಿದೀಪಗಳು ಬೆಳಗುತ್ತಿರಲಿಲ್ಲ. ಕೆಲ ಸಮಯದ ಹಿಂದೆ ದೀಪಗಳು ಬೆಳಗಲಾರಂಭಿಸಿವೆ.
ಒಳಚರಂಡಿ ಇಲ್ಲ
ಒಳಚರಂಡಿ ವಿಷಯದಲ್ಲೂ ಈ ಪ್ರದೇಶ ಹಿಂದುಳಿದಿದೆ. ಒಂದೆರಡು ವಾರ್ಡ್ಗಳಲ್ಲಿ ಈಗ ಕೆಲವು ದಿನಗಳ ಹಿಂದಿನಿಂದ ಒಳಚರಂಡಿ ಕಾಮಗಾರಿ ಆರಂಭವಾಗಿದೆ. ಇಲ್ಲಿ ಇನ್ನೂ ಆರಂಭವಾದಂತಿಲ್ಲ. ಒಳಚರಂಡಿ ಕಾಮಗಾರಿ ಆಗಬೇಕು ಎನ್ನುತ್ತಾರೆ ವಿನೋದ್ ಪೂಜಾರಿ ಅವರು. ಜಲ್ಲಿಮಿಶ್ರಣ ಹಾಕಲು ಅನುದಾನ ಮೀಸಲಿಡ ಲಾಗುತ್ತದೆ. ಇದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಬದಲಾಗಿ ಇಂಟರ್ಲಾಕ್ ಅಳವಡಿಸಿದರೆ ಅನುಕೂಲ ವಾಗುತ್ತದೆ. ಮಠದಬೆಟ್ಟು ರಸ್ತೆ ಬದಿಯೂ ಚರಂಡಿ ಬೇಕು ಎನ್ನುತ್ತಾರೆ ಅವರು.
ತಡೆಗೋಡೆ
ಹೊಳಬದಿಗೆ ತಡೆಗೋಡೆ ಕಟ್ಟದೇ ಇದ್ದರೆ ಮಳೆಗಾಲದಲ್ಲಿ ಉಪ್ಪುನೀರು ಮನೆ ಸಮೀಪ ಬರುತ್ತದೆ. ಸಿಆರ್ಝೆಡ್ ಸಮಸ್ಯೆಯಿಂದಾಗಿ ಹೊಸಮನೆ ನಿರ್ಮಾಣ ಇಲ್ಲಿನ ಜನರಿಗೆ ಗಗನಕುಸುಮವಾಗಿದೆ. ಈ ಕುರಿತು ಜನಪ್ರತಿನಿಧಿಗಳು ಗಮನಹರಿಸಬೇಕು ಎನ್ನುತ್ತಾರೆ ಇಲ್ಲಿನವರು.
ಅನುದಾನಕ್ಕೆ ಕಾಯುತ್ತಿದ್ದೇವೆ
ಶ್ರೀದೇವಿ ನರ್ಸಿಂಗ್ ಹೋಮ್ ಬಳಿ, ಬಬ್ಬರ್ಯನ ಕಟ್ಟೆ ಬಳಿ, ಶಾಂತಿನಿಕೇತನ ಬಳಿ, ಎಚ್ಎಂಎಂ ಶಾಲೆ ಬಳಿ 3.3 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಆಗಲಿದೆ. ಚರಂಡಿ ಕಾಮಗಾರಿಗೆ ಬೇಡಿಕೆಯಿದ್ದು ಅನುದಾನಕ್ಕೆ ಕಾಯುತ್ತಿದ್ದೇವೆ. ಭಗತ್ಸಿಂಗ್ ರಸ್ತೆಯ ಚರಂಡಿ ಮುಂದಿನ ಅನುದಾನ ದೊರೆತ ಕೂಡಲೇ ಆಗಲಿದೆ.
-ವನಿತಾ ಎಸ್. ಬಿಲ್ಲವ,
ಸದಸ್ಯರು, ಪುರಸಭೆ
ರಸ್ತೆ ಆಗಬೇಕು
ನಾಗ ದೇವಸ್ಥಾನ ಸಮೀಪ ರಸ್ತೆಯೊಂದು ಆಗಬೇಕು. ಈ ಅಗಲದ ರಸ್ತೆಯಾದರೆ ವಾಹನಗಳ ಓಡಾಟಕ್ಕೆ ಅನುಕೂಲ. ಕೆರೆಯ ಇನ್ನೊಂದು ಮಗ್ಗುಲಲ್ಲಿ ಇರುವ ರಸ್ತೆ ಕಿರಿದಾಗಿದೆ.
-ಶೀನ ಪೂಜಾರಿ, ಶಾಂತಿನಿಕೇತನ
ಚರಂಡಿ ಆಗಬೇಕು
ಒಳಚರಂಡಿ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕೋಟ್ಯಂತರ ರೂ. ವಿನಿಯೋಗಿಸುತ್ತಿರುವ ಯೋಜನೆ ಇದಾಗಿದ್ದು ಸಮರ್ಪಕ ಚರಂಡಿಯಾದರೆ ಒಂದಷ್ಟು ಸಮಸ್ಯೆ ನಿವಾರಣೆಯಾದಂತೆಯೇ.
-ಗೌತಮ್ ದೇವಾಡಿಗ,ಶಾಂತಿನಿಕೇತನ
ಆಗಬೇಕಾದ್ದೇನು?
-ಸಂಗಂನಿಂದ ಈಸ್ಟ್ವೆಸ್ಟ್ ರೋಡ್ಗೆ ರಿಂಗ್ರೋಡ್
-ಒಳಚರಂಡಿ ಕಾಮಗಾರಿಗೆ ಚಾಲನೆ
-ನಾಗ ದೇವಸ್ಥಾನದ ಕೆರೆ ಬಳಿ ರಸ್ತೆ