ಅತ್ಯಾಧುನಿಕ ಯಂತ್ರ ಬಳಕೆಯಿಂದ ಉತ್ತಮ ಸೇವೆ: ಟಿ. ಗೌತಮ್ ಪೈ
Team Udayavani, Jul 8, 2017, 2:30 AM IST
ಉಡುಪಿ: ಪ್ರಸ್ತುತ ಉದ್ಯಮಗಳು ಉತ್ತಮ ಗುಣಮಟ್ಟದ ಸೇವೆಯನ್ನು ಗ್ರಾಹಕರಿಗೆ ಒದಗಿಸಬೇಕಾದರೆ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಬಳಸಬೇಕಾಗಿದೆ. ಇದರಿಂದ ಗ್ರಾಹಕರು ನೀಡಿದ ಆರ್ಡರ್ಗೆ ಸರಿಯಾಗಿ ಕ್ಲಪ್ತ ಸಮಯದಲ್ಲಿ ಅವರ ಇಚ್ಛೆಗನುಸಾರವಾಗಿ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಮಣಿಪಾಲ್ ಟೆಕ್ನಾಲಜೀಸ್ ಲಿ.ನ ಆಡಳಿತ ನಿರ್ದೇಶಕ ಟಿ. ಗೌತಮ್ ಪೈ ಅವರು ಅಭಿಪ್ರಾಯಪಟ್ಟರು. ಮಣಿಪಾಲದ ಶಿವಳ್ಳಿ ಕೈಗಾರಿಕಾ ವಲಯದಲ್ಲಿರುವ ‘ಪ್ರಿಂಟ್ ಪಾರ್ಕ್ ಉಡುಪಿ’- ಮಲ್ಟಿ ಕಲರ್ ಪ್ರಿಂಟಿಂಗ್ ಪ್ರಸ್ನಲ್ಲಿ ನೂತನವಾಗಿ ಅಳವಡಿಸಲಾದ ಸಿ.ಟಿ.ಪಿ. ಯೂನಿಟ್ ಅನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಶ್ರಮಕ್ಕೆ ತಕ್ಕ ಫಲ
ಹೊಸ ಚಿಂತನೆಗಳ ಮೂಲಕ, ಹೊಸ ಆವಿಷ್ಕಾರಗಳಿಂದ, ಹೊಸ ಉದ್ಯಮ ಆರಂಭಿಸಿ ಹೊಂದಾಣಿಕೆಯಿಂದ ಶ್ರಮ ವಹಿಸಿ ದುಡಿದಾಗ ಯಶಸ್ಸು ಗಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನಶೀಲರಾದ ಈ ಸಂಸ್ಥೆಯ 21 ಮಂದಿ ಸಮಾನ ಉದ್ಯಮದ ಸಮಾನ ಮನಸ್ಕ ಪಾಲುದಾರರು ಅನ್ಯೋನ್ಯತೆಯಿಂದ ಒಂದಾಗಿ ಸಂಸ್ಥೆಯನ್ನು ಕಳೆದ 4 ವರ್ಷಗಳಿಂದ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇನ್ನಷ್ಟು ಹೊಸ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಬಳಸಿಕೊಂಡು ಉದ್ಯಮಕ್ಕೆ ಹೊಸ ರೂಪ ನೀಡುವ ಮೂಲಕ ಸಂಸ್ಥೆ ಯಶಸ್ವಿಯತ್ತ ಸಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾದ ಕಾರ್ಕಳ ಪ್ರವೀಣ ಮುದ್ರಣದ ಆರ್. ಸುರೇಂದ್ರ ಶೆಣೈ, ಉಡುಪಿ ಭಾರತ್ ಪ್ರಸ್ನ ಮಾಲಕ ಟಿ. ದೇವದಾಸ್ ಪೈ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಗಣ್ಯರು, ಹಿತೈಷಿಗಳು ಹಾಗೂ ಪಾಲುದಾರರು ಭಾಗವಹಿಸಿದ್ದರು. ಸಂಸ್ಥೆಯ ಆಡಳಿತ ಪಾಲುದಾರ ಯು. ಮೋಹನ್ ಉಪಾಧ್ಯ ಸ್ವಾಗತಿಸಿ, ಪ್ರಸ್ತಾವನೆಗೈದರು. ಪಾಲುದಾರರಾದ ಎಂ. ಮಹೇಶ್ ಕುಮಾರ್ ನಿರೂಪಿಸಿ, ಸುಬ್ಬರಾವ್ ವಂದಿಸಿದರು.