Udupi ಶಾಲೆಗಳಲ್ಲಿ ಸುರಕ್ಷೆಗೆ ಆದ್ಯತೆ:ನಿರ್ದೇಶ
Team Udayavani, Dec 10, 2023, 11:55 PM IST
ಉಡುಪಿ: ಶಾಲಾ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಅನ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಹಾಗೂ ಶಾಲೆಯನ್ನು ಮೇಲಧಿಕಾರಿಗಳ ಅನುಮತಿ ಇಲ್ಲದೇ ಶೈಕ್ಷಣಿಕೇತರ ಚಟುವಟಿಕೆಗೆ ಬಳಸುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಎಲ್ಲ ಶಾಲಾಡಳಿತ ಮಂಡಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆ (ಪಠ್ಯ/ ಪಠ್ಯೇತರ) ಹೊರತುಪಡಿಸಿ ಸಂಘ-ಸಂಸ್ಥೆಗಳ ಕಾರ್ಯಕ್ರಮ ಅಥವಾ ಇನ್ಯಾವುದೋ ಖಾಸಗಿ ಸಮಾರಂಭ, ರಾಜಕೀಯ ಪಕ್ಷಗಳ ಸಭೆ, ಸಮಾವೇಶ ಸಹಿತ ಯಾವುದೇ ಕಾರ್ಯಕ್ರಮಕ್ಕೂ ಶಾಲಾ ದಿನಗಳಲ್ಲಿ ಕಳಿಸುವಂತಿಲ್ಲ ಎಂಬ ಸ್ಪಷ್ಟ ನಿರ್ದೇಶನವಿದೆ.
ಆದರೆ ಕೆಲವು ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಈ ನಿಯಮ ಉಲ್ಲಂಘನೆಯಾಗುತ್ತಲೇ ಇರುತ್ತದೆ. ಇದಕ್ಕೆಲ್ಲ ಕಡಿವಾಣ ಹಾಕಲು ಇಲಾಖೆ ಈಗ ಮುಂದಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಇತರ ಚಟುವಟಿಕೆಗಳಿಗೆ ಇಲಾಖೆಯ ಅನುಮತಿ ಇಲ್ಲದೇ ತೊಡಗಿಸಿಕೊಳ್ಳುವುದು ಅಥವಾ ಶಾಲಾ ಹಂತದಲ್ಲೇ ಇದಕ್ಕೆ ಅನುಮತಿ ನೀಡಲು ಅವಕಾಶ ಇರುವುದಿಲ್ಲ. ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ಶೈಕ್ಷಣಿಕ ಚಟು ವಟಿಕೆಗಳಲ್ಲೇ ತೊಡಗಿಸಿ ಕೊಳ್ಳಬೇಕು ಎಂದು ಶಾಲಾಡಳಿತ ಮಂಡಳಿಗಳಿಗೆ ಡಿಡಿಪಿಐ, ಬಿಇಒಗಳ ಮೂಲಕ ಸೂಚಿಸಿದೆ.
ಶಾಲಾವರಣದ ಸದ್ವಿನಿಯೋಗ
ಶಾಲಾವರಣವನ್ನು ಶಾಲಾ ಮಕ್ಕಳ ದೈನಂದಿನ ಪಾಠ, ಪ್ರವಚನ, ಪಠ್ಯೇತರ ಚಟುವಟಿಕೆಗಳು, ಕ್ರೀಡೆ, ಆಟೋಟ, ಶಾರೀರಿಕ ಶಿಕ್ಷಣ, ವ್ಯಾಯಾಮ ಮೊದಲಾದ ಚುಟವಟಿಕೆಗಳಿಗೆ ಮಾತ್ರ ಬಳಸಬೇಕು. ಶಾಲಾ ಮೈದಾನ ಅಥವಾ ಕೊಠಡಿಗಳನ್ನು ಶಿಕ್ಷಣಕ್ಕೆ ಹೊರತಾದ ಚಟುವಟಿಕೆಗಳಿಗೆ ಸರಕಾರ ಅಥವಾ ಇಲಾಖೆಯ ಅನುಮತಿ ಇಲ್ಲದೇ ಬಳಸುವಂತಿಲ್ಲ ಹಾಗೂ ಶಾಲಾ ಹಂತದಲ್ಲಿ ಇದಕ್ಕೆ ಅನುಮತಿ ನೀಡ ಬಾರದು. ಸರಕಾರದ ನಿಯಮ ಮೀರಿ ಅನುಮತಿ ನೀಡಿದಲ್ಲಿ ಸಂಬಂಧಪಟ್ಟ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಪೊಲೀಸರಿಗೆ ಮಾಹಿತಿ ನೀಡಿ
ಶಾಲೆಗೆ ಸಂಬಂಧವಿರದ ಯಾವುದೇ ವ್ಯಕ್ತಿಗಳು ಶಾಲಾವರಣದಲ್ಲಿ ಅನಗತ್ಯವಾಗಿ ಸುತ್ತಾಡುತ್ತಿರುವುದು ಕಂಡುಬಂದಲ್ಲಿ ಅಥವಾ ಯಾವುದೇ ವ್ಯಕ್ತಿಗಳಿಂದ ಶಾಲೆಯ ಸುರಕ್ಷೆಗೆ ಭಂಗ ತರುವ ಘಟನೆ ನಡೆದರೆ, ಶೈಕ್ಷಣಿಕ ಚಟುವಟಿಕೆಗೆ ಅಡ್ಡಿ ಪಡಿಸಿರುವುದು ಕಂಡು ಬಂದಲ್ಲಿ ತತ್ಕ್ಷಣವೇ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು/ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಶಾಲಾ ಮುಖ್ಯಸ್ಥರು, ಉಸ್ತುವಾರಿ ಅಧಿಕಾರಿ, ಸಿಬಂದಿಗೆ ಇಲಾಖೆಯಿಂದ ನಿರ್ದೇಶಿಸಲಾಗಿದೆ.