ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ
Team Udayavani, Jan 3, 2019, 8:25 PM IST
ಕೋಟೇಶ್ವರ: ಕೊಡಿಹಬ್ಬದ ಸಂದರ್ಭದಲ್ಲಿ ತರಾತುರಿಯಲ್ಲಿ ಆರಂಭಿಸಿದ್ದ ಬೀಜಾಡಿ ರಾ.ಹೆದ್ದಾರಿಯ ಇಕ್ಕೆಲಗಳ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಏಕಾಏಕಿ ಸ್ಥಗಿತಗೊಂಡಿದೆ. ಇದು ಆ ಮಾರ್ಗವಾಗಿ ಸಂಚರಿಸುವ ವಾಹನ ಚಾಲಕರಿಗೆ ಅಸಮರ್ಪಕ ಸಂಚಾರ ವ್ಯವಸ್ಥೆ ರಸ್ತೆಯಾಗಿ ಮಾರ್ಪಾಡುಗೊಂಡಿದ್ದು ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿರುವುದು ಕಂಡುಬಂದಿದೆ.
ಬೀಜಾಡಿ ಹಾಗೂ ಗೋಪಾಡಿ ಗ್ರಾಮಸ್ಥರ ಬಹಳಷ್ಟು ಸಮಯದ ಬೇಡಿಕೆಗಳಲ್ಲೊಂದಾದ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದ ನವಯುಗ ಕಂಪೆನಿ ಕೆನರಾ ಬ್ಯಾಂಕ್ ತನಕ ಒಂದು ಹಂತದ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿತ್ತು ರಾ. ಹೆದ್ದಾರಿಗೆ ಸರಿ ಸಮಾನವಾಗಿ ಮಣ್ಣು ತುಂಬಿಸಿ ಡಾಮರೀಕರಣ ಮಾಡಬೇಕಾಗಿದ್ದ ಗುತ್ತಿಗೆದಾರರು ಅರ್ಧಕ್ಕೆ ನಿಲ್ಲಿಸಿ ನಾಪತ್ತೆ ಆಗಿರುವುದು ಬೇಜವಾಬ್ದಾರಿ ಕಾರ್ಯ ನಿರ್ವಹಣೆಯಾಗಿದೆ.
ಪ್ರತಿಭಟನೆಗೆ ಸಜ್ಜು: ಸರ್ವಿಸ್ ರಸ್ತೆಯನ್ನು ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಿರುವ ಗುತ್ತಿಗೆದಾರರ ವರ್ತನೆಯಿಂದ ಬೇಸತ್ತ ಗ್ರಾಮಸ್ಥರು ಮುಂದಿನ 15 ದಿನದೊಳಗೆ ಕಾಮಗಾರಿ ಕೈಗೆತ್ತಿಕೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.