ಬೈಂದೂರಿಗೆ ಶೀಘ್ರ ಮಿನಿ ವಿಧಾನಸೌಧ: ಕಾಗೋಡು
Team Udayavani, Feb 15, 2018, 2:55 PM IST
ಬೈಂದೂರು: ರಾಜ್ಯದಲ್ಲಿ ಹೊಸದಾಗಿ ಘೋಷಣೆಯಾದ ತಾಲೂಕುಗಳಲ್ಲಿ ಪ್ರಥಮವಾಗಿ ಬೈಂದೂರು ತಾಲೂಕನ್ನು ಉದ್ಘಾಟಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಘೋಷಣೆಯಂತೆ ಸ್ಪಷ್ಟ ಹಾಗೂ ಪಾರದರ್ಶಕ ಆಡಳಿತ ನೀಡುವಲ್ಲಿ ಸಫಲರಾಗಬೇಕಾದಲ್ಲಿ ಅಧಿಕಾರಿಗಳು ಜನಸ್ನೇಹಿಯಾಗಿ, ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು.
ಬೈಂದೂರಲ್ಲಿ ಜಿಲ್ಲಾಧಿಕಾರಿಗಳು ಶೀಘ್ರ ಪ್ರಸ್ತಾವನೆ ವಿವರವನ್ನು ಸರಕಾರಕ್ಕೆ ಸಲ್ಲಿಸಿದರೆ ಶೀಘ್ರ ಮಿನಿ ವಿಧಾನಸೌಧವನ್ನು ಮಂಜೂರು ಮಾಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಅವರು ಬುಧವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಸಂಯುಕ್ತ ಆಶ್ರಯದಲ್ಲಿ ಬೈಂದೂರಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಬೈಂದೂರು ತಾಲೂಕನ್ನು ಉದ್ಘಾಟಿಸಿ ಮಾತನಾಡಿದರು.
ಬೈಂದೂರು ಶಾಸಕ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ನೂತನ ತಾಲೂಕು ಅಧಿಕೃತ ಘೋಷಣೆಯಾಗಿದೆ. ಬಗರ್ ಹುಕುಂ ಬೇಡಿಕೆಗೆ ಇನ್ನಷ್ಟು ದಿನಗಳ ಅವಧಿ ವಿಸ್ತರಿಸುವ ಆಶಾಭಾವನೆಯಿದೆ. ತಾಲೂಕು ಆವಶ್ಯಕತೆಯ ಬಹುತೇಕ ಕಚೇರಿಗಳು ಆರಂಭಗೊಂಡಿವೆ. ಮುಂದಿನ ಅವಶ್ಯವಿರುವ ಕಚೇರಿಗಳನ್ನು ಶೀಘ್ರವಾಗಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಹೇಳಿದರು.
ಸಚಿವರಿಗೆ ಸಮ್ಮಾನ
ಈ ಸಂದರ್ಭದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಹಿರಿಯರಾದ ಜಗನ್ನಾಥ ಶೆಟ್ಟಿ, ಸುಬ್ರಾಯ ಶೇರುಗಾರ್, ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ ಗೌರಯ್ಯ ಅವರನ್ನು ಸಮ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕುಂದಾಪುರ ಉಪವಿಭಾಗಾಧಿಕಾರಿ ಟಿ. ಭೂಬಾಲನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಜಿ.ಪಂ. ಸದಸ್ಯರಾದ ಶಂಕರ ಪೂಜಾರಿ, ಬಾಬು ಶೆಟ್ಟಿ, ಸುರೇಶ ಬಟ್ವಾಡಿ, ಗೌರಿ ದೇವಾಡಿಗ, ಜಿಲ್ಲಾ ಕೆ.ಡಿ.ಪಿ ಸದಸ್ಯ ಎಸ್.ರಾಜು ಪೂಜಾರಿ, ತಾ.ಪಂ. ಸದಸ್ಯರಾದ ವಿಜಯ ಶೆಟ್ಟಿ ಕಾಲೊ¤àಡು, ಸುಜಾತಾ ದೇವಾಡಿಗ, ಜಗದೀಶ ದೇವಾಡಿಗ, ಶ್ಯಾಮಲಾ ಕುಂದರ್, ಗಿರಿಜಾ ಖಾರ್ವಿ, ಮಾಲಿನಿ ಕೆ., ಮೌಲಾನ ದಸ್ತಗೀರ್, ಪುಷ್ಪರಾಜ್ ಶೆಟ್ಟಿ, ಗ್ರೀಷ್ಮಾ ಗಿರಿಧರ ಭೀಡೆ, ಜಗದೀಶ ಪೂಜಾರಿ, ಪ್ರಮೀಳಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ವಿಶೇಷ ತಹಶೀಲ್ದಾರ್ ಕಿರಣ ಗೌರಯ್ಯ ಸ್ವಾಗತಿಸಿದರು. ಕುಂದಾಪುರ ತಹಶೀಲ್ದಾರ್ ಜಿ. ಎಂ. ಬೋರ್ಕರ್ ವಂದಿಸಿದರು.
94 ಸಿ: ಶೀಘ್ರ ವಿಲೇವಾರಿಗೆ ಸೂಚನೆ
ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಭೂಮಿಯ ಹಕ್ಕು ಪತ್ರ ವನ್ನು ತನ್ನ ಜೀವಿತ ಅವಧಿಯಲ್ಲಿ ಪಡೆಯಬೇಕು. ಅದನ್ನು ಸಮರ್ಪಕ ರೀತಿಯಲ್ಲಿ ನೀಡುವ ಕಾರ್ಯ ವನ್ನು ಅಧಿಕಾರಿಗಳು ಮಾಡಬೇಕು. 94 ಸಿ ಅರ್ಜಿ ವಿಲೇವಾರಿ ಗಳನ್ನು ತ್ವರಿತಗತಿಯಲ್ಲಿ ನೀಡುವಂತೆ ಹಾಗೂ ಈ ವಿಚಾರವನ್ನು ಗಂಭೀರವಾಗಿ ಪರಿ ಗಣಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದೊಮ್ಮೆ ಅರ್ಜಿ ನೀಡದೆ ನಿವೇಶನ ಕಟ್ಟಿದ್ದರೆ ಅಂತವರಿಂದ ಅರ್ಜಿ ಗಳನ್ನು ಪಡೆಯಬೇಕು. ಜನಪರ ಸೇವೆ ನೀಡಿದಾಗ ಮಾತ್ರ ಜನರ ಗೌರವ ದೊರೆಯುತ್ತದೆ.
– ಕಾಗೋಡು ತಿಮ್ಮಪ್ಪ , ಕಂದಾಯ ಸಚಿವ