ಇಂದಿನಿಂದ ಉಡುಪಿಯಲ್ಲೂ “ಸುದಿನ’; ಪರ್ಯಾಯ ಶ್ರೀಗಳಿಂದ “ಸುದಿನ’ ಸಂಚಿಕೆ ಬಿಡುಗಡೆ
"ಕಡೆಗೋಲು' ವಿಶೇಷ ಸಂಚಿಕೆ ಲೋಕಾರ್ಪಣೆ
Team Udayavani, Jan 2, 2020, 8:08 AM IST
ಉಡುಪಿ: ಉದಯವಾಣಿಯ ಉಡುಪಿ “ಸುದಿನ’ ಸಂಚಿಕೆ ಮತ್ತು ಸುದಿನ “ಕಡೆಗೋಲು’ ವಿಶೇಷ ಸಂಚಿಕೆಯನ್ನು ಬುಧವಾರ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
“ಉದಯವಾಣಿ’ಯ ಆರಂಭದ ಸಂಚಿಕೆಯನ್ನು ನೋಡಿದೆ. 50 ವರ್ಷ ಗಳಲ್ಲಿ ಸಂಸ್ಥೆ ಸಾಕಷ್ಟು ಬೆಳೆದು ಕರಾವಳಿ ನಾಡಿನ ಅಗತ್ಯವನ್ನು ಪೂರೈಸುವಲ್ಲಿ ಪೂರಕವಾಗಿ ಸ್ಪಂದಿಸಿ ಜನಾಕರ್ಷಣೆ ಪಡೆದಿದೆ. ಜನರ ಅಭಿರುಚಿಗೆ ತಕ್ಕಂತೆ ವಿಷಯ, ವಿನ್ಯಾಸವನ್ನು ಹೊಸರೂಪದಲ್ಲಿ ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ “ಸುದಿನ’ ಕಲ್ಪನೆ ಶ್ಲಾಘನೀಯ ವಾದುದು. ಶ್ರೀಕೃಷ್ಣನ ನಾಡಿನಲ್ಲಿ “ಕಡೆಗೋಲು’ ವಿಶೇಷ ಸಂಚಿಕೆ ಬಿಡುಗಡೆಗೊಳ್ಳುತ್ತಿರುವುದು ಸಂತೋಷದ ವಿಷಯ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಎಂಎಂಎನ್ಎಲ್ ಸಿಇಒ ವಿನೋದ ಕುಮಾರ್ ಸುದಿನ ಸಂಚಿಕೆ, ವಿಶೇಷ ಸಂಚಿಕೆಯ ಬಗ್ಗೆ ತಿಳಿಸಿದರು.
ಮಣಿಪಾಲ್ ಮೀಡಿಯ ನೆಟ್ವರ್ಕ್ ಲಿ. ಕಾರ್ಯನಿರ್ವಾಹಕ ನಿರ್ದೇಶಕ ಟಿ. ಗೌತಮ್ ಪೈ, ಉದಯವಾಣಿ ಸಂಪಾದಕ ಅರವಿಂದ ನಾವಡ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಸತೀಶ್ ಶೆಣೈ, ರಾಮಚಂದ್ರ ಮಿಜಾರು, ಆನಂದ್ ಕೆ., ಸುದರ್ಶನ್ ಶೇರಿಗಾರ್, ಹರೀಶ್ ಭಟ್, ಉದಯ್ ಕುಮಾರ್ ಹುಬ್ಳಿಕರ್, ರಾಧಾಕೃಷ್ಣ ಭಟ್, ಕಿರಣ್ ಪ್ರಭು, ಅಜಿತ್ ಭಂಡಾರಿ, ರಾಜೇಶ್ ಮೂಲ್ಕಿ ಮೊದಲಾದವರು ಉಪಸ್ಥಿತರಿದ್ದರು.