ಮರಳಿಲ್ಲದೇ ಅಪೂರ್ಣ ಫ್ಲಾ éಟ್ಗಳ ಕಾಮಗಾರಿಗೆ ಹಿನ್ನಡೆ
Team Udayavani, Feb 27, 2019, 1:00 AM IST
ಉಡುಪಿ: ನಿರ್ಮಾಣ ಹಂತದ ಗೃಹ ಖರೀದಿಗೆ ಜಿಎಸ್ಟಿ ದರ ಇಳಿಕೆಯಾಗಿದ್ದರೂ ಮರಳು ಅಲಭ್ಯತೆ ಕಾರಣ ನಿರ್ಮಾಣ ನಿಧಾನವಾಗಿರುವುದು ಗ್ರಾಹಕರನ್ನು ಖರೀದಿಯಿಂದ ದೂರ ನಿಲ್ಲಿಸಿದೆ. ಕಳೆದೊಂದು ವರ್ಷದಿಂದ ಗಂಭೀರವಾಗಿರುವ ಮರಳು ಕೊರತೆ ಕಟ್ಟಡ ನಿರ್ಮಾಣ ಕ್ಷೇತ್ರವನ್ನೇ ನೆಲಕಚ್ಚುವಂತೆ ಮಾಡಿದೆ.
ಶೇ. 40-60 ಸ್ಥಗಿತ
ಮರಳಿನ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಶೇ. 60, ಪಟ್ಟಣ, ನಗರಗಳಲ್ಲಿ ಶೇ. 40ರಷ್ಟು ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿವೆ. ಅರ್ಧದಲ್ಲಿ ನಿಂತ ಕಾಮಗಾರಿಗಳನ್ನು ಕೆಲವರು ಮುಂದುವರಿಸುತ್ತಿದ್ದಾರೆ. ಬಸವ, ಅಂಬೇಡ್ಕರ್ ವಸತಿ ಯೋಜನೆ ಅನುಷ್ಠಾನಕ್ಕೂ ಹಿನ್ನಡೆ ಆಗಿದೆ.
ಸಿಎಫ್ಟಿಗೆ 30ರಿಂದ 65ಕ್ಕೆ ನೆಗೆತ
ಸಿಎಫ್ಟಿಗೆ 30-35 ರೂ. ಇದ್ದ ಮರಳು ಈಗ 60-65 ರೂ.ಗೆ ನೆಗೆದಿದೆ. ಕೆಲವು ಬಿಲ್ಡರ್ಗಳು 3 ಯುನಿಟ್ನ ಒಂದು ಲೋಡ್ಗೆ 16,000 ರೂ.ಗಳಿಂದ 18,000 ರೂ. ತೆತ್ತು ಮರಳು ಖರೀದಿಸುತ್ತಿದ್ದಾರೆ. ಕಾಳಸಂತೆಯಲ್ಲಿ ಸಿಗುವ ಮರಳಿನಲ್ಲಿ ಶೇ. 25 ವೇಸ್ಟೇಜ್ ಇದೆ. ಇದರಿಂದ ಮತ್ತಷ್ಟು ನಷ್ಟ ಎಂಬುದು ಬಿಲ್ಡರ್ಗಳ ದೂರು.
ಎಂ ಸ್ಯಾಂಡ್ ಪರೀಕ್ಷೆಗೆ 7 ದಿನ
ಗುಣಮಟ್ಟದ ಎಂ-ಸ್ಯಾಂಡ್ ಕೂಡ ಮರಳಿನಷ್ಟೆ (ಕಾಳಸಂತೆಯಲ್ಲಿ ಸಿಗುವ) ದುಬಾರಿ. ಸಿಎಫ್ಟಿಗೆ 65 ರೂ., 3 ಯುನಿಟ್ನ 1 ಲೋಡ್ಗೆ 15ರಿಂದ 18 ಸಾವಿರ ರೂ. ಇದೆ. ಎಂ ಸ್ಯಾಂಡ್ ಧೂಳು ಮಿಶ್ರಿತ ಇದ್ದರೆ ಅಪಾಯ. ಇದರ ಪರೀಕ್ಷೆಗೆ ಲ್ಯಾಬ್ಗ ಹೋಗಬೇಕು. ಮಣಿಪಾಲ ಎಂಐಟಿಯಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಇದಕ್ಕೆ ವಾರ ತಗಲುತ್ತದೆ. ಪ್ರತಿ ಲೋಡ್ಗೆ ಪರೀಕ್ಷೆ ಅಸಾಧ್ಯ ಎಂಬುದು ಗುತ್ತಿಗೆದಾರರ ಅಸಹಾಯಕತೆ.
ಪ್ಲಾಸ್ಟರಿಂಗ್ ಅಸಾಧ್ಯ
ಸ್ಲಾéಬ್, ಕಾಂಕ್ರೀಟ್ಗೆ ಎಂ ಸ್ಯಾಂಡ್ ಬಳಕೆ ಮಾಡಬಹುದು. ಆದರೆ ಅದರಿಂದ ಗಾರೆ ಅಸಾಧ್ಯ.
ಗಾರೆಗೆ ಎಂ ಸ್ಯಾಂಡ್ ಬಳಸಿದರೆ 2 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
1,000 ಚ.ಅಡಿಗೆ 1.5 ಲ.ರೂ. ಹೊರೆ
ಹಿಂದೆ ಮರಳಿಗೆ 1 ಯುನಿಟ್ಗೆ 2,500 ರೂ. ಇತ್ತು. ಈಗ 5,000 ರೂ. ಆಗಿದೆ. 1 ಸಾವಿರ ಚದರ ಅಡಿ ಕಟ್ಟಡಕ್ಕೆ 75 ಯೂನಿಟ್ ಮರಳು ಅಗತ್ಯವಿದೆ ಎಂದರೆ ಒಟ್ಟು 1.5 ಲ.ರೂ. ಹೆಚ್ಚುವರಿ ಹೊರೆ ಬೀಳುತ್ತಿದೆ.
ಎಂ-ಸ್ಯಾಂಡ್ಗೆ 30 ಅರ್ಜಿ ಜಿಲ್ಲೆಯಲ್ಲಿ 30 ಕ್ರಷರ್ನವರು ಎಂ-ಸ್ಯಾಂಡ್ ಉತ್ಪಾದನೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿವೆ.
7 ಸದಸ್ಯರ ಸಮಿತಿ ಸಭೆ ಬಾಕಿ
ಜಿಲ್ಲೆಯಲ್ಲಿ ಪಾಪನಾಶಿನಿಯಲ್ಲಿ 4, ಸ್ವರ್ಣಾದಲ್ಲಿ 3 ಮತ್ತು ಸೀತಾನದಿಯಲ್ಲಿ 1 ಸೇರಿ ಒಟ್ಟು 8 ದಿಬ್ಬಗಳಲ್ಲಿ 7 ಲಕ್ಷ ಟನ್ ಮರಳು ಗುರುತಿಸಲಾಗಿದ್ದು, ತೆರವು ಪ್ರಕ್ರಿಯೆ ಬಾಕಿ ಇದೆ. 7 ಸದಸ್ಯರ ಸಮಿತಿ ಸಭೆ ಇನ್ನೂ ನಡೆದಿಲ್ಲ.
ವೆಚ್ಚ ಶೇ. 12ಕ್ಕೆ ಏರಿಕೆ
ಹಿಂದೆಲ್ಲ ಒಂದು ಕಟ್ಟಡ ನಿರ್ಮಾಣದಲ್ಲಿ ಮರಳಿನ ವೆಚ್ಚ ಶೇ. 5-6ರಷ್ಟು ಎಂದು ನಿಗದಿಗೊಳಿಸಲಾಗುತ್ತಿತ್ತು. ಆದರೆ ಈಗ ಅದು ಶೇ. 10ರಿಂದ 12ಕ್ಕೇರಿದೆ. ಮರಳಿನ ಅಲಭ್ಯತೆ, ದರ ಏರಿಕೆಯಿಂದ ನಿರ್ಮಾಣ ಕ್ಷೇತ್ರ ಬಹುತೇಕ ಸ್ಥಗಿತಗೊಳ್ಳುವ ಹಂತದಲ್ಲಿದೆ. ಆರ್ಥಿಕ ವಹಿವಾಟುಗಳು ನಿಂತು ಹೋಗಿವೆ.
– ಗೋಪಾಲ ಭಟ್, ಅಧ್ಯಕ್ಷರು, ಉಡುಪಿ ಜಿಲ್ಲಾ ಎಂಜಿನಿಯರ್ ಅಸೋಸಿಯೇಶನ್
-ಸಂತೋಷ್ ಬೊಳ್ಳೆಟ್ಟು