ಗಂಗೊಳ್ಳಿ ಖಾರ್ವಿಕೇರಿ: ತೀವ್ರ ಕಡಲ್ಕೊರೆತ
Team Udayavani, Jul 26, 2017, 8:45 AM IST
ಕುಂದಾಪುರ: ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾರ್ವಿಕೇರಿಯಲ್ಲಿ ತೀವ್ರತರದ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಸಮೀಪದ ಐದಾರು ಮನೆಗಳು ಹಾಗೂ ದೋಣಿ ಸಂರಕ್ಷಿಸಿಡುವ ಶೆಡ್ ಅಪಾಯದಂಚಿನಲ್ಲಿದೆ. ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದ್ದು, ಕಡಲ್ಕೊರೆತದ ತೀವ್ರತೆ ಇಳಿಮುಖವಾಗಿತ್ತು. ಆದರೆ ಸೋಮವಾರ ರಾತ್ರಿ ಖಾರ್ವಿಕೇರಿಯ ತಾತ್ಕಾಲಿಕ ತಡೆಗೋಡೆಯ ದಕ್ಷಿಣ ಭಾಗದಲ್ಲಿ ಕಡಲ್ಕೊರೆತ ಉಗ್ರ ಸ್ವರೂಪ ಪಡೆದುಕೊಂಡಿದೆ. ಈಗಾಗಲೇ ಹಲವು ಮರಗಳು ಕಡಲಪಾಲಾಗಿವೆ. ಇನ್ನೂ ಕೆಲವು ಮರಗಳು, ಕಡಲ ತೀರದಲ್ಲಿರುವ ಮೀನುಗಾರರ ಮನೆಗಳು ನೀರುಪಾಲಾಗುವ ಭೀತಿ ಎದುರಿಸುತ್ತಿವೆ.
ಗಂಗೊಳ್ಳಿ ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ ಘಟನಾ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ್ದಾರೆ. ಪರಿಸ್ಥಿತಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು; ತಾತ್ಕಾಲಿಕ ತಡೆಗೋಡೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ಬಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.