ಶಿರ್ವ: ಬಸ್ಸು ನಿಲ್ದಾಣದ ಧ್ವನಿವರ್ಧಕ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಉದ್ಘಾಟನೆ
Team Udayavani, Jul 22, 2022, 7:11 PM IST
ಶಿರ್ವ: ಇಲ್ಲಿನ ಗ್ರಾ.ಪಂ. ನ ನೂತನ ಬಸ್ಸು ನಿಲ್ದಾಣದಿಂದ ಬೇರೆ ಬೇರೆ ಊರುಗಳಿಗೆ ಹೋಗುವ ಬಸ್ಸಿನ ಸಮಯ,ಹೆಸರು,ಬಸ್ಸುಗಳು ಹೋಗುವ ಮಾರ್ಗಗಳ ಮಾಹಿತಿ (ರೈಲು ನಿಲ್ದಾಣಗಳಲ್ಲಿರುವಂತೆ ) ಹಾಗೂ ಇತರೆ ಮಾಹಿತಿಗಳನ್ನು ಧ್ವನಿವರ್ಧಕ ಸಹಿತ ಟಿ.ವಿ. ಪರದೆಯ ಮೂಲಕ ಬಿತ್ತರಿಸುವ ವ್ಯವಸ್ಥೆ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯ ಉದ್ಘಾಟನೆಯು ಜು. 22 ರಂದು ಬಸ್ಸು ನಿಲ್ದಾಣದಲ್ಲಿ ನಡೆಯಿತು.
ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್ ಎರಡೂ ವ್ಯವಸ್ಥೆಗಳನ್ನು ಉದ್ಘಾಟಿಸಿ ಮಾತನಾಡಿ ದಾನಿಗಳಾದ ಇನ್ಫೋಜೆಂಟ್ ಟೆಕ್ನಾಲಾಜಿಸ್ನ ಬಿಹಾರ ಮೂಲದ ಸುಧಾಂಶು ಅವರಿಂದ ಪ್ರಯಾಣಕರಿಗೆ ಮಾಹಿತಿ ನೀಡುವ ಧ್ವನಿವರ್ಧಕ ಸಹಿತ ಟಿವಿ ಪರದೆ ಮತ್ತು ಎಡ್ವರ್ಡ್ ಮಿಸ್ಕಿತ್ ಅವರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯ ಕೊಡುಗೆಯನ್ನು ಉದ್ಘಾಟಿಸಲಾಗಿದ್ದು, ದಾನಿಗಳ ಕೊಡುಗೆಯ ಸದುಪಯೋಗ ಪ್ರಯಾಣಿಕರಿಗೆ ಸಿಗುವಂತಾಗಲಿ ಎಂದು ಹೇಳಿದರು.
ಶಿರ್ವ ಠಾಣಾಧಿಕಾರಿ ರಾಘವೇಂದ್ರ ಸಿ. ಮಾತನಾಡಿ ಕಳೆದ ಎರಡೂವರೆ ತಿಂಗಳಲ್ಲಿ ದಾನಿಗಳಿಂದ ಬಸ್ಸ್ಟಾಂಡ್, ಸಿಸಿ ಕ್ಯಾಮರಾ, ಹೈಮಾಸ್ಟ್ ದೀಪ ಸಹಿತ ಹಲವಾರು ಅಭಿವೃದ್ಧಿಯ ಕೆಲಸಗಳು ನಡೆದಿದ್ದು,ಇಂದಿನ ಡಿಜಿಟಲ್ ಯುಗದಲ್ಲಿ ದಾನಿಗಳು ನೀಡಿರುವ ಕೊಡುಗೆ ಶಿರ್ವ ಗ್ರಾಮದ ಅಭಿವೃದ್ಧಿಗೆ ಪೂರಕವಾಗಲಿ ಎಂದರು.
ದಾನಿಗಳಾದ ಇನ್ಫೋಜೆಂಟ್ ಟೆಕ್ನಾಲಾಜಿಸ್ನ ಸುಧಾಂಶು ಮತ್ತು ಉದ್ಯಮಿ ಎಡ್ವರ್ಡ್ ಮಿಸ್ಕಿತ್ ಅವರನ್ನು ಶಿರ್ವ ಗ್ರಾ.ಪಂ. ವತಿಯಿಂದ ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜಾ , ಗ್ರಾಮ ಕರಣಿಕ ವಿಜಯ್,ಗುತ್ತಿಗೆದಾರ ರಾಜೇಶ್ ನಾಯ್ಕ,ಶಿರ್ವ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಪ್ರೇಮನಾಥ ಶೆಟ್ಟಿ, ಗಿರಿಧರ ಪ್ರಭು,ಉದ್ಯಮಿ ಶ್ರೀಧರ ಕಾಮತ್,ಗ್ರಾ.ಪಂ. ಪ್ರಭಾರ ಕಾರ್ಯದರ್ಶಿ ಚಂದ್ರಮಣಿ, ಹಾಗೂ ಸಿಬಂದಿ ಮತ್ತು ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು,ಪ್ರಯಾಣಿಕರು ಉಪಸ್ಥಿತರಿದ್ದರು. ಗ್ರಾ.ಪಂ. ಪಿಡಿಒ ಅನಂತಪದ್ಮನಾಭ ನಾಯಕ್ ಸ್ವಾಗತಿಸಿ, ವಂದಿಸಿದರು.