ಗುರಿಕಾರರ ಸಮಾವೇಶ, ಸಾಮೂಹಿಕ ವೀಳ್ಯಶಾಸ್ತ್ರ
Team Udayavani, Apr 1, 2017, 11:40 AM IST
ಉಡುಪಿ: ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಆಶ್ರಯದಲ್ಲಿ, ಮೊಗವೀರ ಯುವ ಸಂಘಟನೆಯ ನೇತೃತ್ವದಲ್ಲಿ ಗುರಿಕಾರರ ಸಮಾವೇಶ ಮತ್ತು ಸಾಮೂಹಿಕ ವೀಳ್ಯಶಾಸ್ತ್ರ ಕಾರ್ಯಕ್ರಮ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಬುಧವಾರ ನಡೆಯಿತು.
ವರದಕ್ಷಿಣೆ ಸಾಮಾಜಿಕ ಪಿಡುಗನ್ನು ನಾವೆಲ್ಲಾ ಒಂದಾಗಿ ಎದುರಿಸಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಡಾ| ಜಿ. ಶಂಕರ್ ಹೇಳಿದರು. ಎ. 17ರಂದು ನಡೆಯುವ 9ನೇ ವರ್ಷದ ಸಾಮೂಹಿಕ ವಿವಾಹದಲ್ಲಿ 21 ಜೋಡಿ ವಿವಾಹವಾಗಲಿದ್ದು ಅವರಿಗೆ ಸೀರೆ, ರವಿಕೆ ಕಣ, ಕುರ್ತಾ, ಪೈಜಾಮ, ಪೇಟ, ಕಾಲುಂಗುರ ವಿತರಿಸಲಾಯಿತು.
ಯುವ ಸಂಘಟನೆಯ ಅಧ್ಯಕ್ಷ ಗಣೇಶ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಚ್ಚಿಲ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಎಚ್., ಆನಂದ ಸಿ. ಕುಂದರ್, ಬಾರಕೂರು ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ವಿಶ್ವನಾಥ ಮಾಸ್ತರ್, ಮೊಗವೀರ ಮಹಾಜನ ಸಂಘದ ಕುಂದಾಪುರ ಶಾಖೆ ಅಧ್ಯಕ್ಷ ಕೆ.ಕೆ. ಕಾಂಚನ್ ಉಪಸ್ಥಿತರಿದ್ದರು.
ಮೊಗವೀರರ ಸಮಾಜದ ಕೂಡುಕಟ್ಟಿನ ಎಲ್ಲ ನೀತಿ ನಿಯಮ ಪಾಲಿಸಿ ಕೊಂಡು ಬಂದ ಮೂರು ಹೋಬಳಿಗಳ ಆಯ್ದ ಗ್ರಾಮ ಸಭೆಗಳಾದ ಶಿರಿಯಾರ ಸಭೆಯ ಅಧ್ಯಕ್ಷ ರಾಜೀವ ಮರಕಾಲ, ಕುಂದಾಪುರ ಟಿ.ಟಿ. ಕೂಡಿಗೆ ಅಧ್ಯಕ್ಷ ಬಾಲಣ್ಣ ಗುರಿಕಾರ, ಕುದ್ರೋಳಿ 2 ಅಧ್ಯಕ್ಷ ವಿಶ್ವನಾಥ ಮೆಂಡನ್ ಅವರನ್ನು ಸಮ್ಮಾನಿಸಲಾಯಿತು.